ADVERTISEMENT

ಪ್ರತಿಭಾವಂತರಿಗೆ ಪ್ರೋತ್ಸಾಹ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 11:15 IST
Last Updated 8 ಸೆಪ್ಟೆಂಬರ್ 2011, 11:15 IST

ಚನ್ನಗಿರಿ: ದೇಶದಲ್ಲಿ ಪ್ರತಿಭಾವಂತರ ಕೊರತೆ ಇಲ್ಲ. ಆದರೆ, ಸಮರ್ಪಕವಾಗಿ ಅವಕಾಶ ಸಿಗದೇ ಪ್ರತಿಭೆ ಹೊರದೇಶಗಳಿಗೆ ಪಲಾಯನವಾಗುತ್ತಿದೆ. ಆದ್ದರಿಂದ ಪ್ರತಿಭಾವಂತರು ನಮ್ಮ ದೇಶದಲ್ಲಿ ಉಳಿಯಲು ಪ್ರೋತ್ಸಾಹ ನೀಡುವುದು ಅಗತ್ಯವಿದೆ ಎಂದು ಹರಿಹರ ಎಸ್‌ಜೆವಿಪಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎ.ಬಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಶಿವಲಿಂಗೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕ್ರೀಡಾ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಓದುವ ವಿದ್ಯಾರ್ಥಿಗಳು ಉತ್ತಮ ಪ್ರತಿಭೆ ಹೊಂದಿರುತ್ತಾರೆ. ಅಕ್ಷರ ಜಗತ್ತು ಇಂದು ಸಾಂಸ್ಕೃತಿಕ ನೆಲೆಗಳ ಮೇಲೆ ನಿಂತಿದೆ. ವಿದ್ಯಾರ್ಥಿಗಳು ಬದುಕಿನ ಉತ್ತಮ ನೆಲೆಗಟ್ಟನ್ನು ಕಂಡುಕೊಂಡರೆ ಉತ್ತಮ ಸಾಧನೆ ಮಾಡಬಹುದು ಎಂದರು.

ಪ.ಪಂ. ಅಧ್ಯಕ್ಷೆ ಪುಷ್ಪಲತಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ನೀಲಪ್ಪ, ಪಿ.ಎಲ್. ಮಲ್ಲಿಕಾರ್ಜುನ್, ಹಿರಿಯ ಉಪನ್ಯಾಸಕ ಮಧ್ವಚಾರ್ಯ, ಪ್ರೊ.ಲಿಂಗಪ್ಪ, ಬಿ.ಆರ್. ರವಿ, ಕೆ.ವಿ. ವಿಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಪ್ರೊ.ಜಿ.ಆರ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಪ್ರಾರ್ಥಿಸಿದರು. ಮಲ್ಲಿಕಾರ್ಜುನಪ್ಪ ಸ್ವಾಗತಿಸಿದರು.

ಜನನ, ಮರಣ ನೋಂದಣಿ ಕಡ್ಡಾಯ
ದೇಶದಲ್ಲಿ ಸಂಭವಿಸುವ ಜನನ, ಮರಣ ಕುರಿತ ವಿಶ್ವಾಸಾರ್ಹ ಮಾಹಿತಿಯು ಜನಸಂಖ್ಯಾ ಸಂಚಲನೆ ಕುರಿತಂತೆ ಭವಿಷ್ಯತ್ತಿನ ಕಾರ್ಯ ಯೋಜನೆ ರೂಪಿಸುವುದಕ್ಕೆ ಹಾಗೂ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ನೋಂದಣಿ ಆವಶ್ಯವಾಗಿದೆ. ಆದ್ದರಿಂದ, ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಎನ್. ಗಣೇಶ್‌ನಾಯ್ಕ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಬುಧವಾರ ನಡೆದ ಆರೋಗ್ಯ ಸಹಾಯಕಿಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಜನನ, ಮರಣ ನೋಂದಣಿ ತರಬೇತಿ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಇಒ ಎಲ್. ಕೃಷ್ಣನಾಯ್ಕ, ಸಿಡಿಪಿಒ ಎ.ಜಿ. ಶಿವಪ್ರಕಾಶ್, ಜಿಲ್ಲಾ ಸಾಂಘಿಕ ಅಧಿಕಾರಿ ಎಂ.ವಿ. ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು. ಕಮಲಮ್ಮ ಪ್ರಾರ್ಥಿಸಿದರು. ವಿಶ್ವನಾಥ್ ಸ್ವಾಗತಿಸಿದರು. ಎಚ್.ಡಿ. ನಾಗರಾಜ್ ಕಾರ್ಯಕ್ರಮ ನಿರೂಪಿಸಿ, ಮಂಜುನಾಥ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.