ADVERTISEMENT

ಬಸವಾಪಟ್ಟಣ: ಸಿಡಿ ಉತ್ಸವಕ್ಕೆ ಬಂದ ಜನಸಾಗರ

‘ದುರ್ಗಾದೇವಿಗೆ ಉಧೋ’ ಎನ್ನುತ್ತಾ ಭಕ್ತಿ ಭಾವದಿ ಮಿಂದೆದ್ದ ಜನರು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 8:46 IST
Last Updated 31 ಮಾರ್ಚ್ 2018, 8:46 IST

ಬಸವಾಪಟ್ಟಣ: ಇಲ್ಲಿನ ಪುರಾಣ ಪ್ರಸಿದ್ಧ ದುರ್ಗಾದೇವಿ ಜಾತ್ರೆಯ ಸಿಡಿ ಉತ್ಸವ ಸಹಸ್ರಾರು ಜನರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.ಸುತ್ತಲಿನ ಗ್ರಾಮಗಳಿಂದ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಗಳಲ್ಲಿ ಕರೆ ತಂದು ಗಂಗಾಪೂಜೆ ನೆರವೇರಿಸಲಾಯಿತು. ನಂತರ ದುರ್ಗಾದೇವಿಯ ಮೂರ್ತಿಯನ್ನು ಸಿಡಿ ಉತ್ಸವದ ಅಂಗಳದ ಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಯಿತು.ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ನಂತರ ಸಿಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ದುರ್ಗಾದೇವಿ ಕಳಶ, ದಂಡ ಒಳಗೊಂಡ 30 ಅಡಿ ಉದ್ದ ಹಾಗೂ ಎರಡು ಅಡಿ ಸುತ್ತಳತೆಯ ಭಾರಿ ಗಾತ್ರದ ಸಿಡಿ ಕಂಬವನ್ನು ತಿರುಗುತ್ತಿದ್ದಂತೆ ಸಹಸ್ರಾರು ಭಕ್ತರು ‘ಉಧೋ’ ಎಂದು ಘೋಷಣೆ ಕೂಗಿದರು.

ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಬಂದಿದ್ದರು. ಭಕ್ತರಿಂದ ಬೆಟ್ಟ ತುಂಬಿ ತುಳುಕುತ್ತಿತ್ತು. ದೇವಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ಬೆಟ್ಟ ಏರಿ ಆಯಾಸಗೊಂಡಿದ್ದ ಭಕ್ತರಿಗೆ ಪಾನಕ ವಿತರಿಸಲಾಯಿತು.ಬಸವಾಪಟ್ಟಣ, ಸುತ್ತಲಿನ ಗ್ರಾಮಗಳ ಜನ ವರ್ಣರಂಜಿತ ಕಮಾನು ಬಂಡಿಗಳಲ್ಲಿ ಪಾನಕದ ಹಂಡೆಗಳನ್ನು ತುಂಬಿಕೊಂಡು ಬಂದಿದ್ದರು. ಎತ್ತಿನ ಬಂಡಿಗಳು ಏರು ಬೆಟ್ಟವನ್ನು ಹತ್ತುತ್ತಿದ್ದ ದೃಶ್ಯ ರೋಮಾಂಚನಕಾರಿಯಾಗಿತ್ತು. ಶನಿವಾರ ದೇವಿಯ ಭಂಡಾರ ತಣಿಗೆ ಉತ್ಸವ ನಡೆಯಲಿದ್ದು, ದೇವಸ್ಥಾನ ಸಮಿತಿ ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT