ದಾವಣಗೆರೆ: ಬಾಳೆ ಬೆಲೆ ತೀವ್ರ ಕುಸಿತ ಕಂಡಿದ್ದು ಬಾಳೆ ಬೆಳೆಗಾರರ ಬಾಳು ಕತ್ತಲಕೂಪಕ್ಕೆ ಸರಿದಿದೆ. ಜಿಲ್ಲೆಯಲ್ಲಿ ಒಟ್ಟು 4,750 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದ್ದು, ದರ ಕುಸಿತದಿಂದ ಬೆಳೆಗಾರರು ಕಂಗಲಾಗಿದ್ದಾರೆ.
ಪ್ರಸಕ್ತ ವರ್ಷದಲ್ಲಿ 1661 ಹೆಕ್ಟೇರ್ನಲ್ಲಿ 32,464 ಟನ್ ಪಚ್ಚೆ ಬಾಳೆ, 348 ಹೆಕ್ಟೇರ್ನಲ್ಲಿ 44,250 ಟನ್ ಏಲಕ್ಕಿ ಬಾಳೆ ಬೆಳೆಯಲಾಗಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.
ತೋಟಗಾರಿಕೆ ಸಚಿವರ ಕ್ಷೇತ್ರದಲ್ಲೇ ಅನ್ಯಾಯ?: ಬಾಳೆ ಬೆಳೆಗಾರರು ದಲ್ಲಾಳಿಗಳ ಕಪಿಮುಷ್ಠಿಯಿಂದ ಹೊರ ಬಾರದೇ ನರಳಾಡುತ್ತಿದ್ದಾರೆ. ದಲ್ಲಾಳಿಗಳ ಹಾವಳಿ ತಪ್ಪಿಸಿ, ರೈತರಿಗೆ ನೇರ ಮಾರು ಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ತೋಟಗಾರಿಕೆ ಮತ್ತು ಎಪಿಎಂಸಿ ಖಾತೆ ಸಚಿವ ಶಾಮನೂರು ಶಿವಶಂಕರಪ್ಪ ಯಾವುದೇ ಸಮಾಲೋಚನೆ ಸಭೆ ನಡೆಸಿಲ್ಲ. ರೈತರಿಗೆ ಆಗಿರುವ ಅನ್ಯಾಯ ವನ್ನು ಶೀಘ್ರ ತಡೆಯಬೇಕಿದೆ ಎನ್ನುತ್ತಾರೆ ರೈತ ಮುಖಂಡರು.
ಪರಿಹಾರಕ್ಕೆ ಒತ್ತಾಯ: ಜಿಲ್ಲೆಯಲ್ಲಿ ರೈತರು ಬೆಳೆದ ಬಾಳೆಗೆ ಬೆಂಬಲ ಬೆಲೆ ಸಿಗದೇ ಇರುವುದರಿಂದ ನಷ್ಟದ ಕೂಪಕ್ಕೆ ಸಿಲುಕಿದ್ದಾರೆ. ಆದ್ದರಿಂದ ಪ್ರತಿ ಎಕರೆಗೆ ₹2 ಲಕ್ಷ ಪರಿಹಾರ ಘೋಷಿಸಬೇಕು ಎಂಬ ಮಾತು ರೈತ ಮುಖಂಡರದ್ದು. ಕಬ್ಬಿನ ದರ ಕಡಿಮೆ ಆದ್ದರಿಂದ ರೈತರು ಬಾಳೆಗೆ ಹೆಚ್ಚು ಒತ್ತು ನೀಡಿದ್ದರಿಂದ ಬಾಳೆ ಉತ್ಪನ್ನ ಹೆಚ್ಚಾಗಿ ದರ ಕುಸಿತ ಕಂಡಿದೆ. ಅಲ್ಲದೇ ತಮಿಳುನಾಡಿನ ಸೇಲಂ ಬಾಳೆಗೆ ಹೆಚ್ಚು ಬೇಡಿಕೆ ಇರುವುದೂ ದರ ಇಳಿಕೆಗೆ ಕಾರ ಣ ಎಂದು ವಿಶ್ಲೇಷಿಸುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.
ಉಚಿತ ವಿತರಣೆ: ದರ ಕುಸಿತದಿಂದ ಕೆ.ಜಿಗೆ ಒಂದು ರೂಪಾಯಿಗೆ ಮಾರುವ ಬದಲು ದಾವಣಗೆರೆ ಜಿಲ್ಲೆ ಯಲ್ಲಿ ಈಚೆಗೆ ಸಾರ್ವಜ ನಿಕರಿಗೆ ಉಚಿತ ವಾಗಿ ಬಾಳೆಹಣ್ಣು ವಿತರಿಸಿ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.