ADVERTISEMENT

ಬೇಸಗೆ ಮುನ್ನವೇ ಖಾಲಿಯಾದ ಗೋಕಟ್ಟೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 5:30 IST
Last Updated 14 ಅಕ್ಟೋಬರ್ 2012, 5:30 IST

ಮಲೇಬೆನ್ನೂರು: ಮನ್ನಾ ಜಂಗಲ್ ಪ್ರದೇಶದ ಮುದ್ದಪ್ಪನ ಕೆರೆ ಕೆಳಭಾಗದಲ್ಲಿ ಪ್ರಾಣಿ ಪಕ್ಷಿ ಸಂಕುಲದ ಕುಡಿಯುವ ನೀರಿಗೆ ನಿರ್ಮಿಸಿರುವ ಗೋಕಟ್ಟೆಗೆ ರೈತರು ಅಕ್ರಮ ಪಂಪ್‌ಸೆಟ್ ಅಳವಡಿಸಿಕೊಂಡ ಕಾರಣ ನೀರು ತಳಮಟ್ಟ ಕಂಡಿದೆ.

ಪ್ರಸಕ್ತ ವರ್ಷ ಮಳೆ ಕೈಕೊಟ್ಟಿದ್ದು ಪ್ರಾಣಿಗಳಿಗೆ ಕುಡಿಯುವ ನೀರಿನ ಆಸರೆಯಾದ ಮುದ್ದಪ್ಪನ ಕೆರೆ ಖಾಲಿ ಹೊಡೆಯುತ್ತಿವೆ.

ಕಳೆದ ವಾರ ಸುರಿದ 2 ದಿನದ ಮಳೆಗೆ ಸ್ವಲ್ಪ ನೀರು ಸಂಗ್ರಹವಾಗಿ ನೆಮ್ಮದಿ ತಂದಿತ್ತು. ಆದರೆ, ಸುತ್ತಮುತ್ತಲ ಪ್ರದೇಶದ ಮೆಕ್ಕೆಜೋಳ ಬೆಳೆದ ರೈತರು ನಾಲ್ಕಾರು ಪಂಪ್‌ಸೆಟ್ ಹಾಕಿಕೊಂಡು ನೀರು ಎತ್ತಿದ ಕಾರಣ 3 ದಿನದಲ್ಲಿ ನೀರು ಖಾಲಿಯಾಗಿದೆ ಎಂದು ಗೋಮಾಳಕ್ಕೆ ಹಸು, ಎಮ್ಮೆ ಹಾಗೂ ಕುರಿ ಕಳುಹಿಸುವವರು ಸಮಸ್ಯೆ ವರದಿ ಮಾಡುವಂತೆ ಗುರುವಾರ ಕೋರಿ ಆತಂಕ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿದ ಗೋಕಟ್ಟೆ ಒಂದು ಪಾರ್ಶ್ವದ ಕೆಳೆಗೆ ನೀರು ನಿಲ್ಲದೆ ಬಸಿದು ಹೋಗುತ್ತಿದೆ. ವಿಚಾರ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದರೂ ಯಾವುದೆ ಪ್ರಯೋಜನ ಆಗಿಲ್ಲ. ಗೋಕಟ್ಟೆ ಸಂಪೂರ್ಣ ಖಾಲಿ ಆಗುವುದನ್ನು ತಡೆಯುವಂತೆ ಆಗ್ರಹಿಸಿದರು. 

ಗೋಕಟ್ಟೆಗೆ ನದಿನೀರು: ಗೋಕಟ್ಟೆ ಚಿತ್ರ ತೆಗೆಯುವ ವೇಳೆ ಆಗಮಿಸಿದ ಕೆಲವು ರೈತರು ವಿಚಾರಣೆ ಮಾಡಿದರು.
ಸಮೀಪದ ತುಂಗಭದ್ರಾ ನದಿಯಿಂದ ಮುದ್ದಪ್ಪನ ಕೆರೆ ಹಾಗೂ ಗೋಕಟ್ಟೆಗೆ ನೀರು ಒದಗಿಸುವ ಕುರಿತು ಯೋಜನಾ ವರದಿ ತಯಾರಿಸಲು ಮಾಡಲು ಬಂದಿರುವುದಾಗಿ ತಿಳಿಸಿದ ನಂತರ ಭಾವಚಿತ್ರ ತೆಗೆಯಲು ಅನುವು ಮಾಡಿಕೊಟ್ಟ ಘಟನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.