ADVERTISEMENT

ಬ್ಯಾಂಕ್ ಅಭಿವೃದ್ಧಿಗೆ ವೃತ್ತಿಕೌಶಲ ಪೂರಕ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 11:05 IST
Last Updated 16 ಜೂನ್ 2011, 11:05 IST

ದಾವಣಗೆರೆ: ಸಹಕಾರ ಬ್ಯಾಂಕ್ ಸಿಬ್ಬಂದಿಗೆ ವೃತ್ತಿಕೌಶಲ ಇದ್ದಾಗ ಮಾತ್ರ ಬ್ಯಾಂಕ್‌ನ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಯೂನಿಯನ್, ಪಟ್ಟಣ ಸಹಕಾರ ಬ್ಯಾಂಕುಗಳ ಒಕ್ಕೂಟದ ಆಶ್ರಯದಲ್ಲಿ ನಗರದಲ್ಲಿ ಬುಧವಾರ, ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗೆ ಹಮ್ಮಿಕೊಂಡಿದ್ದ, ವೃತ್ತಿಕೌಶಲ ತರಬೇತಿ ಕುರಿತಾದ ಒಂದು ದಿನದ ವಿಶೇಷ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾಂಕಿನಲ್ಲಿ ಖಾತೆ ತೆರೆಯುವ, ಸಾಲ ಪಡೆಯುವ ಗ್ರಾಹಕರ ಹಿನ್ನೆಲೆ, ಹಣ ಮರುಪಾವತಿ ಸಾಮರ್ಥ್ಯ ಇತ್ಯಾದಿ ವಿಷಯಗಳ ಬಗ್ಗೆ ಸಿಬ್ಬಂದಿಗೆ ಅರಿವಿರಬೇಕಾಗುತ್ತದೆ. ಹಾಗಾದಾಗ ಮಾತ್ರ ಯಾವುದೇ ಮೋಸವಿಲ್ಲದಂತೆ ಬ್ಯಾಂಕ್ ವ್ಯವಹಾರ ನಿರ್ವಹಣೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ತರಬೇತಿ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎನ್.ಎಂ.ಜೆ.ಬಿ. ಆರಾಧ್ಯ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕರಿಗೆ ತೃಪ್ತಿಕರ ಸೇವೆ ನೀಡಿದರೆ ಮಾತ್ರ ಅವರು ಬ್ಯಾಂಕಿನತ್ತ ಆಕರ್ಷಿತರಾಗುತ್ತಾರೆ. ಸಿಬ್ಬಂದಿ ಕರ್ತವ್ಯದ ವೇಳೆಯಲ್ಲಿ ಸ್ವಂತ ವಿಚಾರಗಳತ್ತ ಗಮನಹರಿಸದೇ ಗ್ರಾಹಕರ ಸೇವೆ, ಬ್ಯಾಂಕಿನ ಅಭಿವೃದ್ಧಿಗೆ ಮಹತ್ವ ಕೊಡಬೇಕು ಎಂದು ಕರೆ ನೀಡಿದರು.

ಈ ನಿಟ್ಟಿನಲ್ಲಿ ವೃತ್ತಿಕೌಶಲ್ಯ ತರಬೇತಿ ನೆರವಾಗುತ್ತದೆ. ಜಿಲ್ಲೆಯ ಎಲ್ಲ ಅರ್ಬನ್ ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳಿಗೆ ಇದರ ಪ್ರಯೋಜನ ತಲುಪಲಿ ಎಂದು ಅವರು ಹಾರೈಸಿದರು.

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕ ಎಂ.ಟಿ. ಮಂಜುನಾಥ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎನ್. ಸುರೇಶ್, ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳಾದ ಡಿ.ಎಸ್. ಶ್ರೀನಿವಾಸ್, ವೇಣುಗೋಪಾಲ್, ಸಹಕಾರಿ ಮುಖಂಡರಾದ ಮತ್ತಿಹಳ್ಳಿ ವೀರಣ್ಣ, ರಮಣ್‌ಲಾಲ್, ಎಸ್.ಕೆ. ವೀರಣ್ಣ, ಕಿರುವಾಡಿ ಸೋಮಶೇಖರ್, ಪರಶುರಾಮಪ್ಪ, ದೇವರಮನೆ ಶಿವಕುಮಾರ್, ಟಿ.ಎಂ. ಪಾಲಾಕ್ಷ ಮುಂತಾದವರು ಹಾಜರಿದ್ದರು. ಕೊಟ್ರಯ್ಯ ಸ್ವಾಗತಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.