ADVERTISEMENT

ಮಾಯಕೊಂಡ; ಮುಗಿಯದ ಗೊಂದಲ

ರಾಜ್ಯದಲ್ಲಿ ಅತಿಹೆಚ್ಚು ನಾಮಪತ್ರ ಸಲ್ಲಿಸಿರುವ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 12:35 IST
Last Updated 19 ಏಪ್ರಿಲ್ 2013, 12:35 IST

ಮಾಯಕೊಂಡ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದರೂ ಅಭ್ಯರ್ಥಿಗಳಲ್ಲಿ ಮೂಡಿರುವ ಗೊಂದಲ ಮುಗಿದಿಲ್ಲ. ಮಾಯಕೊಂಡ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿ ಅತಿಹೆಚ್ಚು ನಾಮಪತ್ರ ಸಲ್ಲಿಸಿರುವ ಕ್ಷೇತ್ರವಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಇಬ್ಬರಿಗೆ ಬಿ-ಫಾರಂ ನೀಡಿ ಗೊಂದಲಕ್ಕೆ ಕಾರಣವಾದ ಕೆಜೆಪಿ ಅಭ್ಯರ್ಥಿಗಳಲ್ಲಿ ಪ್ರೊ.ಲಿಂಗಣ್ಣ ಅಧಿಕೃತ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ನಿರಾಶರಾಗಿರುವ ಕೊಟ್ರೇಶ್ ನಾಯ್ಕ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ಹಾದಿ ತುಳಿಯಲಿದ್ದಾರೆ. ಕೆಜೆಪಿ ಟಿಕೆಟ್‌ಗೆ ಯತ್ನಿಸಿ ಸೋತ ಅಭ್ಯರ್ಥಿಗಳು ಬಹುತೇಕ ಬೆಂಬಲಿಗರ ನಿರ್ಧಾರದ ಮೇಲೆ ಅವಲಂಬಿತರಾಗಿದ್ದು, ನಾಳೆ ತಮ್ಮ ಬೆಂಬಲಿಗರ ಸಭೆ ಕರೆಯಲು ಸಿದ್ಧತೆ ನಡೆಸುತ್ತಿದ್ದಾರೆ. 

ಕೆಜೆಪಿಯವರು ಬೆಂಬಲಿಗರ ನಿರ್ಧಾರಕ್ಕೆ ಕಾಯುತ್ತಿದ್ದರೆ, ಕಾಂಗ್ರೆಸ್ ಬಂಡಾಯವಾಗಿ ಕಣದಲ್ಲಿರುವ ಡಾ.ವೈ.ರಾಮಪ್ಪ, ಬಸವಂತಪ್ಪ, ಬಿ.ಎಚ್ ವೀರಭದ್ರಪ್ಪ, ಎಚ್.ಕೆ. ಬಸವರಾಜಪ್ಪ ಮತ್ತಿತರರಿಗೆ ಕಣದಲ್ಲಿ ಉಳಿಯುವಂತೆ ಬೆಂಬಲಿಗರು ಒತ್ತಾಯಿಸುತ್ತ್ದ್ದಿದಾರೆ. ಆದರೂ ಇವರೆಲ್ಲ ಕಣದಿಂದ ಹಿಂದೆ ಸರಿಯುವ ಅಥವಾ ಕಣದಲ್ಲೇ ಉಳಿಯುವ ನಿರ್ಧಾರಕ್ಕಾಗಿ ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸೂಚನೆಗಾಗಿ ಕಾಯುತ್ತಿದ್ದಾರೆ. ದೆಹಲಿಯಲ್ಲಿರುವ ಮಲ್ಲಿಕಾರ್ಜುನ್ ನಾಳೆ ನಗರಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಅವರು ಬಂದ ನಂತರ ಕಾಂಗ್ರೆಸ್ ಅಭ್ಯರ್ಥಿಗಳ ಗೊಂದಲಕ್ಕೆ ತೆರೆ ಬೀಳಲಿದೆ.

ಕೆಜಿಪಿ ಬಂಡಾಯ ಅಭ್ಯರ್ಥಿ ಆನಂದಪ್ಪ ಈಗಾಗಲೇ ಪ್ರಚಾರಕ್ಕೆ ಧುಮಿಕಿದ್ದಾರೆ. ಜೆಡಿಎಸ್‌ನ ಬಿ-ಫಾರಂ ಪಡೆದ ಕೆ.ಜಿ.ಆರ್. ನಾಯ್ಕ, ಕಾಂಗ್ರೆಸ್ ಬಿ-ಫಾರಂ ಪಡೆದಿರುವ ಶಿವಮೂರ್ತಿ ಮುಖಂಡರ ಸಭೆ ಮತ್ತು ರೋಡ್ ಷೋಗೆ ಸಿದ್ದರಾಗಿದ್ದಾರೆ.
ನಾಮಪತ್ರ ವಾಪಸ್ ಪಡೆಯಲು ಏ. 20 ಕಡೆಯ ದಿನವಾಗಿದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.