ADVERTISEMENT

ಮುಳುವಾದ ವಯೋಮಿತಿ ನಿರ್ಬಂಧ!

ದೇವದಾಸಿ ಪುನರ್‌ವಸತಿ ಯೋಜನೆಗೆ ಹಿನ್ನಡೆ; ಮರುಸಮೀಕ್ಷೆಗೆ ಒತ್ತಾಯ

ಮಲ್ಲೇಶ್ ನಾಯಕನಹಟ್ಟಿ
Published 15 ಜೂನ್ 2013, 10:40 IST
Last Updated 15 ಜೂನ್ 2013, 10:40 IST

ದಾವಣಗೆರೆ: ದೇವದಾಸಿಯರ ಸಮೀಕ್ಷೆ ನಡೆಸಿರುವ ರಾಜ್ಯ ಸರ್ಕಾರ, ಗಣತಿ ಪಟ್ಟಿಯಲ್ಲಿ 45 ವರ್ಷ ವಯೋಮಿತಿಯ ನಿರ್ಬಂಧ ರೂಪಿಸಿರುವುದು ರಾಜ್ಯದ ಮಾಜಿ ದೇವದಾಸಿ ಮಹಿಳೆಯರ ಬದುಕಿಗೆ ಮುಳುವಾಗಿ ಪರಿಣಮಿಸಿದೆ. ಇದರಿಂದಾಗಿ, ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಾಜಿ ದೇವದಾಸಿ ಯರು ಸಮೀಕ್ಷೆಯಿಂದ ಹೊರಗುಳಿದಿದ್ದು, `ದೇವದಾಸಿ ಪುನರ್ ವಸತಿ ಯೋಜನೆ'ಗೆ ಹಿನ್ನಡೆಯಾಗಿದೆ.

1982ರಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ರೂಪಿಸಿತ್ತು. ಅದನ್ನು 1994ರಲ್ಲಿ ದೇವೇಗೌಡ ನೇತೃತ್ವದ ಜನತಾ ಸರ್ಕಾರ ಅಧಿಕೃತವಾಗಿ ರಾಜ್ಯದಲ್ಲಿ ಅನುಷ್ಠಾನಗೊಳಿಸಿತು.

2007-08ನೇ ಸಾಲಿನಲ್ಲಿ ಸರ್ಕಾರ ಜಿಲ್ಲೆಯಲ್ಲಿ ದೇವದಾಸಿಯರ ಸಮೀಕ್ಷಾ ಕಾರ್ಯ ನಡೆಸುವ ಮೂಲಕ  45 ವರ್ಷ ದಾಟಿದ 2,620 ದೇವದಾಸಿಯರನ್ನು `ಮಾಜಿ ದೇವದಾಸಿಯರು' ಎಂದು ಗುರುತಿಸಿತ್ತು. ಅವರಲ್ಲಿ 1,804 ಮಂದಿ ಅರ್ಹ ಫಲಾನುಭವಿಗಳೆಂದು ಗುರುತಿಸಿ ರೂ400 ಮಾಸಾಶನ ನೀಡುತ್ತ ಬಂದಿದೆ.

ಉಳಿದವರನ್ನು ವಯೋಮಿತಿ ಕಾರಣ ನೀಡಿ ಸರ್ಕಾರಿ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಲಾಗಿದೆ. ಸಮಾಜ, ಕುಟುಂಬ ಹಾಗೂ ಸರ್ಕಾರದ ಸೌಲಭ್ಯದಿಂದ ವಂಚಿತಗೊಂಡ ದೇವದಾಸಿಯರು ಹೊಟ್ಟೆಪಾಡಿಗಾಗಿ ಮತ್ತೆ ಈ ಅನಿಷ್ಟ ಪದ್ಧತಿಯನ್ನು ಆಶ್ರಯಿಸುವಂತಾಗಿದೆ ಎಂದು ಕರ್ನಾಟಕ ರಾಜ್ಯ ದೇವದಾಸಿ ಪದ್ಧತಿ ವಿಮೋಚನಾ ಸಂಘಗಳ ಮೂಲಗಳು ಹೇಳುತ್ತವೆ.

ರಾಜ್ಯದಲ್ಲಿ ದೇವದಾಸಿ ಪದ್ಧತಿಗೆ ಕಡಿವಾಣ ಹಾಕಲೆಂದೇ 2009ರಲ್ಲಿ ರಾಜ್ಯ ಸರ್ಕಾರ `1982 ದೇವದಾಸಿ ಪದ್ಧತಿ ನಿಷೇಧ' ಕಾಯ್ದೆಗೆ ತಿದ್ದುಪಡಿ ತಂದು, ಆ ಮೂಲಕ ಮಾಜಿ ದೇವದಾಸಿಯರನ್ನು ಮುಖ್ಯವಾಹಿನಿಗೆ ತರುವ ಕೆಲವು ಯೋಜನೆಗಳನ್ನು ಜಾರಿಗೊಳಿಸಿತು. ಆದರೆ, ಸರ್ಕಾರದ ಸೌಲಭ್ಯ ಪಡೆಯಲು ದೇವದಾಸಿಯರಿಗೆ ಸರ್ಕಾರವೇ ರೂಪಿಸಿರುವ ವಯೋಮಿತಿ ನಿಯಮ ಅಡ್ಡಗಾಲಾಗಿ ನಿಂತಿದೆ.

`ಜಿಲ್ಲೆಯಲ್ಲಿ ದೇವದಾಸಿಯರ ಸಮೀಕ್ಷೆಯನ್ನು ಸರ್ಕಾರ ಸರಿಯಾಗಿ ನಡೆಸಿಲ್ಲ. ಶೇ 99ರಷ್ಟು ದೇವದಾಸಿ ಮಹಿಳೆಯರು ಅನಕ್ಷರಸ್ಥರಾಗಿದ್ದಾರೆ. ಅವರಿಗೆ ಸರ್ಕಾರಿ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ಇಲ್ಲ.

ಸರ್ಕಾರ ಕೂಡ ಅರಿವು ಮೂಡಿಸುವ ಕಾರ್ಯ ಕೈಗೊಂಡಿಲ್ಲ. ಸ್ವಾಭಿಮಾನ, ಸಂಕೋಚ ಮತ್ತು ಮಧ್ಯವರ್ತಿಗಳ ಒತ್ತಡದಿಂದಾಗಿ ಅವರು ಸಮೀಕ್ಷೆಗೆ ಒಳಪಡದೇ ಹೊರಗುಳಿದಿದ್ದಾರೆ. ಅಂತಹವರನ್ನು ಗುರುತಿಸಿ ಮುಖ್ಯವಾಹಿನಿಗೆ ತರದ ಹೊರತು ದೇವದಾಸಿ ಪದ್ಧತಿಗೆ ಕಡಿವಾಣ ಸಾಧ್ಯವಿಲ್ಲ.ಸರ್ಕಾರ ಶೀಘ್ರ ದೇವದಾಸಿಯರ ಮರುಸಮೀಕ್ಷೆ ನಡೆಸಬೇಕಿದೆ' ಎಂದು ಒತ್ತಾಯಿಸುತ್ತಾರೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಕೆ.ಎಲ್. ಭಟ್.

ವಯೋಮಿತಿ ನಿರ್ಬಂಧ ಏಕೆ...?
ವಿಧವೆಯರಿಗೆ, ಅಂಗವಿಕಲರಿಗೆ ಇಲ್ಲದ ವಯೋಮಿತಿ ನಿರ್ಬಂಧ ನಮಗೇಕೆ? ರಾಜ್ಯದಲ್ಲಿ 20ರಿಂದ 40 ವರ್ಷದ ಒಳಗಿನ ದೇವದಾಸಿಯರ ಸಂಖ್ಯೆ ಹೆಚ್ಚಿದೆ. ಇವರನ್ನೇ ಕೈಬಿಟ್ಟರೆ ದೇವದಾಸಿ ಪದ್ಧತಿ ನಿಯಂತ್ರಣ ಸಾಧ್ಯವೇ? ವೃದ್ಧಾಪ್ಯ ವೇತನ ಇದ್ದವರಿಗೆ ದೇವದಾಸಿ ಮಾಸಾಶನ ನೀಡದಂತೆ ಸರ್ಕಾರ ನಿಯಮ ರೂಪಿಸಿದೆ. ಆದರೆ, ತಿಂಗಳಿಗೆ ಸರ್ಕಾರ ನೀಡುವ ರೂ400ಗಳಿಂದ ಜೀವನ ನಿರ್ವಹಣೆ ಸಾಧ್ಯವೇ? ಸರ್ಕಾರ ವಯೋಮಿತಿ ನಿಯಮ ತೆಗೆದುಹಾಕುವ ಮೂಲಕ ಸಮೀಕ್ಷೆ ಕೈಗೊಳ್ಳಬೇಕು. ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ.
- ರೇಣುಕಮ್ಮ, ಮಾಜಿ ದೇವದಾಸಿ, ಹರಪನಹಳ್ಳಿ.

ಗುರುತಿಸುವ ಕಾರ್ಯ ನಡೆದಿದೆ...
ದೇವದಾಸಿ ಪದ್ಧತಿ ಸಮೀಕ್ಷೆಯಿಂದ ಹೊರಗುಳಿದವರನ್ನು `ದೇವದಾಸಿ ಗಣತಿ ಪಟ್ಟಿ'ಗೆ  ಸೇರಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಅರ್ಹ ಫಲಾನುಭವಿಗಳಿಗೆ ಬೇಕಾಗುವಷ್ಟು ಅನುದಾನ ಸರ್ಕಾರದಿಂದ ಸಿಕ್ಕಿಲ್ಲ. ಹಾಗಾಗಿ, ಜಿಲ್ಲೆಯಲ್ಲಿನ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಆಗಿಲ್ಲ.

ಈಗಾಗಲೇ ಸ್ವಂತ ನಿವೇಶನ ಹೊಂದಿರುವ ಫಲಾನುಭವಿಗಳಿಗೆ ವಿಶೇಷ ಘಟಕ ಅಭಿವೃದ್ಧಿ ಯೋಜನೆಯಡಿ 70 ಆಶ್ರಯ ಮನೆಗಳ  ನಿರ್ಮಾಣಕ್ಕೆ ಅನುದಾನ ಕಲ್ಪಿಸಲಾಗಿದೆ.
- ಪ್ರಜ್ಞಾ, ಜಿಲ್ಲಾ ಯೋಜನಾ ಅನುಷ್ಠಾನಾಧಿಕಾರಿ,  ದಾವಣಗೆರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.