ಹೊನ್ನಾಳಿ: ಪಟ್ಟಣದ ಬೀರಲಿಂಗೇಶ್ವರ ದೇವರ ಕಾರ್ತಿಕೋತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಕುಸ್ತಿ ಪಂದ್ಯಾವಳಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರು, ಕುಸ್ತಿ ಕ್ರೀಡಾಪಟುಗಳನ್ನು ಪರಿಚಯಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪುರಾತನ ಕಾಲದಿಂದಲೂ ಗ್ರಾಮೀಣ ಕ್ರೀಡೆ ಕುಸ್ತಿ ಪಂದ್ಯಕ್ಕೆ ವಿಶೇಷ ಮಹತ್ವವಿದೆ ಎಂದರು.
ಹೊನ್ನಾಳಿಯ ಹೊಡೆತ ಎನ್ನುವ ಹೆಸರಿನಿಂದ ಆರಂಭವಾಗುವ ಕುಸ್ತಿ ಪಂದ್ಯಾವಳಿ ನಾಡಿನೆಲ್ಲೆಡೆ ಜನಪ್ರಿಯವಾಗಿದೆ. ಇದನ್ನು ಕುವೆಂಪು ಅವರು ತಮ್ಮ ಕಾದಂಬರಿಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದರು.
ಇಂದು ಮತ್ತು ನಾಳೆ: ಗುರುವಾರ ಮತ್ತು ಶುಕ್ರವಾರ ದಾವಣಗೆರೆ, ಧಾರವಾಡ, ಮೈಸೂರು, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಿಂದ ಪೈಲ್ವಾನರು ಬರುವ ನಿರೀಕ್ಷೆಯಿದ್ದು, ದೊಡ್ಡ ಪೈಲ್ವಾನರಿಗೆ ₹ 10 ಸಾವಿರದಿಂದ ₹ 15 ಸಾವಿರದವರೆಗೆ ನಗದು ಬಹುಮಾನ ಮತ್ತು ಬೆಳ್ಳಿ ಗದೆಯನ್ನು ನೀಡಿ ಗೌರವಿಸಲಾಗುವುದು ಎಂದರು.
ಊಟ ವಸತಿ ವ್ಯವಸ್ಥೆ: ಹೊರಭಾಗಗಳಿಂದ ಬರುವ ಪೈಲ್ವಾನರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ.
ಕುಸ್ತಿ ಲೈಸೆನ್ಸ್ನ ಎಚ್.ಬಿ.ಗಿಡ್ಡಪ್ಪ, ಮುಖಂಡರಾದ ಪರಸಣ್ಣಾರ ನರಸಿಂಹಪ್ಪ, ಗೌಡ್ರು ನರಸಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮಪ್ಪ, ಗಣಮಕ್ಕಳಾದ ಅಣ್ಣಪ್ಪ ಸ್ವಾಮಿ, ಕುಮಾರಸ್ವಾಮಿ, ಪಟ್ಟಣ ಪಂಚಾಯ್ತಿ ಸದಸ್ಯರಾದ ಹೊಸಕೇರಿ ಸುರೇಶ್, ಎಚ್.ಡಿ.ವಿಜೇಂದ್ರಪ್ಪ, ಭಂಗಿ ನಾಗರಾಜಪ್ಪ, ದ್ಯಾಮಜ್ಜಿ ಈರಪ್ಪ, ಪೈಲ್ವಾನ್ ಕುಮಾರ್, ಅಡ್ಡಗಣ್ಣಾರ ಗಾಳೇಶ್, ಮಾರ್ಜೋಗಿ ಬಸವರಾಜಪ್ಪ, ಕಾಡಸಿದ್ದಪ್ಪ, ವಸಂತನಾಯ್ಕ, ಎಂ.ವಾಸಪ್ಪ, ಕತ್ತಿಗೆ ನಾಗರಾಜಪ್ಪ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.