ADVERTISEMENT

ರಸಗೊಬ್ಬರದ ನೆಪದಲ್ಲಿ ವಿವಿಧ ಪದಾರ್ಥ ಮಾರಾಟ

ಮಾರಾಟಗಾರರ ಮಾಹಿತಿ ನೀಡಲು ಕೋರಿಕೆ, ಕೃಷಿ ಇಲಾಖೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 10:33 IST
Last Updated 15 ಜೂನ್ 2013, 10:33 IST

ದಾವಣಗೆರೆ: ಜಿಲ್ಲೆಯಲ್ಲಿ ರಸಗೊಬ್ಬರ ಹೆಸರಲ್ಲಿ ವಿವಿಧ ಪದಾರ್ಥಗಳನ್ನು ಮಾರಾಟ ಮಾಡುವ ವ್ಯವಸ್ಥಿತ ಜಾಲ ಕಂಡುಬಂದಿದೆ. ಈ ಬಗ್ಗೆ ಜಿಲ್ಲೆಯ ರೈತರು ಎಚ್ಚರಿಕೆಯಿಂದ ಇರಬೇಕು ಎಂದು ಕೃಷಿ ಇಲಾಖೆ ಎಚ್ಚರಿಸಿದೆ.

ಜಿಲ್ಲೆಯ ರೈತರು ಮೋಸದ ಜಾಲಕ್ಕೆ ಬಲಿಯಾಗುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿದೆ. ರಸಗೊಬ್ಬರಗಳ ಹೆಸರಿನ ವಿವಿಧ ಪದಾರ್ಥಗಳನ್ನು ಅನಧಿಕೃತವಾಗಿ ಬಿಲ್ ಇಲ್ಲದೇ ಮಾರಾಟ ಮಾಡಲಾಗುತ್ತಿದೆ.

ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾಮದ ಆರೋಗ್ಯ ಹಾಲಿನ ಕೇಂದ್ರದಲ್ಲಿ ಅದೇ ಗ್ರಾಮದ ರಾಜು, ಎಂ.ಬಿ.ಸಿದ್ದೇಶ್, ಸಿದ್ದೇಶ್ `ಅನ್ನದಾತ ಮಾರ್ಕಿನ ಕ್ಯಾಲ್ಶಿಯಂ, ಮೆಗ್ನೇಷಿಯಂ, ಗಂಧಕ (12:03:05) ಹೊಂದಿರುವ ಸಾವಯವ ಭೂಸುಧಾರಕ ಮಾರಾಟ ಮಾಡಿರುವುದು ಕಂಡು ಬಂದಿದೆ. ಈ ಗೊಬ್ಬರ ಕುರಿತು ಯಾವುದೇ ಬಿಲ್ ನೀಡದೇ ವಹಿವಾಟು ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್.ಜಿ.ಗೊಲ್ಲರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ಚೀಲಕ್ಕೆ ರೂ 650 ದರದಲ್ಲಿ ರೈತರು ಖರೀದಿಸಿದ್ದು, ಯಾವುದೇ ಗಟ್ಟಿ ಗೊಬ್ಬರ ಬಳಸುವ ಅಗತ್ಯತೆ ಇಲ್ಲ ಎಂದು ರೈತರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಕೇವಲ ಲಘು ಪೋಷಕಾಂಶ ಬಳಸಿದರೆ ಬೆಳೆ ಬರಲು ಸಾಧ್ಯವಿಲ್ಲ. ಗಟ್ಟಿ ಗೊಬ್ಬರ ಅಂದರೆ ಡಿಎಪಿ, ಎಂಒಪಿ ಮತ್ತು ಯೂರಿಯ ಬಳಸಬೇಕು. ಯಾವುದೇ ಸಾರಜನಕ, ರಂಜಕ ಮತ್ತು ಪೊಟಾಷ್‌ಯುಕ್ತ ರಸಗೊಬ್ಬರ ಬಳಸಬೇಕು.

ಮೂಲಗೊಬ್ಬರ ಕೊಟ್ಟಿಲ್ಲವಾದ್ದರಿಂದ ಆದಷ್ಟು ಜಾಗೃತೆಯಿಂದ ಎಡೆ ಹೊಡೆದು ಗಟ್ಟಿಗೊಬ್ಬರ ಕೊಡಬೇಕು ಎಂದು ರೈತರಿಗೆ ಸಲಹೆ ನೀಡಿದ್ದಾರೆ.

ನಕಲಿಗೊಬ್ಬರ ಮಾರಾಟಕ್ಕೆ ಯುವತಿಯರನ್ನು ಸಹ ಬಳಸಲಾಗುತ್ತಿದೆ. ಈ ಬಗ್ಗೆ ರೈತರು ಎಚ್ಚರಿಕೆಯಿಂದ ಇರಬೇಕು. ಜೊತೆಗೆ, ಅನಧಿಕೃತ ಮಾರಾಟಗಾರರ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡಲಾಗುವುದು. ಮಾಹಿತಿ ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.
ಮಾಹಿತಿಗೆ  ದೂರವಾಣಿ: 08192 230311 ಅಥವಾ 253981 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.