ADVERTISEMENT

ಶುಲ್ಕ ನೀತಿ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 5:25 IST
Last Updated 9 ಅಕ್ಟೋಬರ್ 2012, 5:25 IST

ಹರಿಹರ: ಬಿಸಿಎಂ ವಿದ್ಯಾರ್ಥಿಗಳ ಶುಲ್ಕ ನೀತಿ ವಿರೋಧಿಸಿ ತಾಲ್ಲೂಕು ಎಬಿವಿಪಿ ಘಟಕದ ಕಾರ್ಯಕರ್ತರು ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು.ನಗರದ ಗಿರಿಯಮ್ಮ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಗೊಂಡಿತು. ಶಿವಮೊಗ್ಗ ರಸ್ತೆ ಮೂಲಕ ತಾಲ್ಲೂಕು ಕಚೇರಿ ತಲುಪಿತು.

ಎಬಿವಿಪಿ ಕಾಲೇಜು ಕಾರ್ಯದರ್ಶಿ ಬಿ.ಎನ್. ಸ್ನೇಹಾ ಮಾತನಾಡಿ, ಕಳೆದ ವರ್ಷ ಬಿಸಿಎಂ ಪದವಿ ವಿದ್ಯಾರ್ಥಿಗಳು ್ಙ  150 ಶುಲ್ಕವನ್ನು ಭರಿಸಿದ್ದರು. ಪ್ರಸ್ತುತ ವರ್ಷ ್ಙ  1,497 ಶುಲ್ಕ ಭರಿಸಬೇಕಾಗಿದೆ. ರಾಜ್ಯ ಸರ್ಕಾರ ಬಿಸಿಎಂ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ರದ್ದುಗೊಳಿಸಿದೆ. ಪೂರ್ಣ ಪ್ರಮಾಣದ ಶುಲ್ಕವನ್ನು ವಿದ್ಯಾರ್ಥಿಗಳೇ ಭರಿಸಬೇಕು ಎಂಬ ಸರ್ಕಾರದ ಆದೇಶ ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ.

ಎರಡು ವಾರದಲ್ಲಿ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭವಾಗಲಿವೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ರದ್ದುಗೊಳಿಸಿರುವುದು ಖಂಡನಾರ್ಹ. ಸರ್ಕಾರ ಕೂಡಲೇ, ತನ್ನ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಜಿ. ನಜ್ಮಾ ಅವರಿಗೆ ಮನವಿ ಸಲ್ಲಿಸಿದರು.

ಎಬಿವಿಪಿ ಮುಖಂಡ ಸಿದ್ದೇಶ ಕುರ್ಚಿಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನೆಯಲ್ಲಿ ಪವಿತ್ರಾ, ರಶ್ಮೀ, ರೂಪಾ, ಜೀವಿತಾ, ಶ್ವೇತಾ, ಅಂಬಕ್ಕ, ಲಾವಣ್ಯ, ರಂಜಿತಾ, ಅಶ್ವಿನಿ, ಮಂಜುಳಾ, ಪ್ರಿಯಾ, ವಿನಿತಾ, ಗುರುಬಸಮ್ಮ, ಸುಪ್ರಿಯಾ, ವಿದ್ಯಾ, ಕವಿತಾ, ಆಶಾ, ಮಂಜು, ಹರೀಶ್, ತೀರ್ಥಕುಮಾರ್, ಲಿಂಗರಾಜ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.