ADVERTISEMENT

100 ದಿನ ಸಾವಿರ ಗ್ರಾಮ ಭೇಟಿ: ಈಶ್ವರಾನಂದ ಶ್ರೀ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:59 IST
Last Updated 11 ಅಕ್ಟೋಬರ್ 2021, 2:59 IST
ದಾವಣಗೆರೆ ತಾಲ್ಲೂಕಿನ ಲೋಕಿಕೆರೆ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ತಾಲ್ಲೂಕಿನ ಗ್ರಾಮಾಂತರ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿದರು
ದಾವಣಗೆರೆ ತಾಲ್ಲೂಕಿನ ಲೋಕಿಕೆರೆ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ತಾಲ್ಲೂಕಿನ ಗ್ರಾಮಾಂತರ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿದರು   

ದಾವಣಗೆರೆ: ಮಠವನ್ನು ಬೆಳೆಸುವ ಮತ್ತು ಸಮಾಜವನ್ನು ಒಗ್ಗೂಡಿಸುವ ಸದುದ್ದೇಶದಿಂದ ಬರುವ ಸಂಕ್ರಾಂತಿಯ ದಿನದಿಂದ ಹೊಸದುರ್ಗ ಶಾಖಾಮಠದ ವ್ಯಾಪ್ತಿ ಜಿಲ್ಲೆಗಳಲ್ಲಿ 100 ದಿನ ಸಾವಿರ ಗ್ರಾಮಗಳಿಗೆ ಭೇಟಿ ಮಾಡಲಾಗುವುದು ಎಂದು ಹೊಸದುರ್ಗ ಶಾಖಾ ಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಲೋಕಿಕೆರೆ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ತಾಲ್ಲೂಕಿನ ಗ್ರಾಮಾಂತರ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಹೊಸದುರ್ಗ ಶಾಖಾಮಠದ ಆವರಣದಲ್ಲಿ 30 ಎಕರೆ ಜಮೀನಿನಲ್ಲಿ ಸುಮಾರು ₹ 20 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ₹ 12 ಕೋಟಿ ವೆಚ್ಚದ ಕಾಮಗಾರಿ ಮುಗಿದಿದೆ. ದೇಶದಲ್ಲಿಯೇ ಅತೀ ಎತ್ತರದ ಕನಕದಾಸರ ಏಕಶಿಲಾ ಮೂರ್ತಿಯ ಕೆತ್ತನೆಯ ಕೆಲಸ ಸೇರಿ ಕೆಲವು ಕಾರ್ಯಗಳು ಆಗಬೇಕಿದೆ ಎಂದರು.

ADVERTISEMENT

ಶಾಖಾಮಠದ ವ್ಯಾಪ್ತಿಗೆ ಬರುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರಗಳಲ್ಲಿ ಭಕ್ತರನ್ನು ಭೇಟಿ ಮಾಡಲಾಗುವುದು. ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

ಈಗಾಗಲೇ ಕಾಗಿನೆಲೆ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಕೆಲಸ ನಡೆಯುತ್ತಿದೆ. ನಮ್ಮ ಮಠದ ವ್ಯಾಪ್ತಿಯಲ್ಲಿ ಸದ್ಯ ಆರು ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲಾ-ಕಾಲೇಜು ಮತ್ತು ಹಾಸ್ಟೆಲ್‍ಗಳನ್ನು ಕಟ್ಟುವ ಮೂಲಕ ಕನಿಷ್ಠ 1 ಲಕ್ಷ ಮಕ್ಕಳಿಗೆ ವಿದ್ಯೆ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ವೆಂಕಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸತೀಶ್, ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಮುದಹದಡಿ ದಿಳ್ಳೆಪ್ಪ, ಪ್ರಧಾನ ಕಾರ್ಯದರ್ಶಿ ಅಣಬೇರು ಶಿವಮೂರ್ತಿ, ನಿವೃತ್ತ ಜಿಲ್ಲಾ ನೋಂದಣಾಧಿಕಾರಿ ಮಾಯಕೊಂಡದ ಮಲ್ಲಿಕಾರ್ಜುನಪ್ಪ, ಮುಖಂಡರಾದ ಅಂಜಿನಪ್ಪ, ಮತ್ತಿ ಮಂಜುನಾಥ್, ಸಿ.ಡಿ. ಮಹೇಂದ್ರ ರಾಮಗೊಂಡನಹಳ್ಳಿ, ಮಳಲ್ಕೆರೆ ಪ್ರಕಾಶ್, ಅಣಜಿ ಗುಡ್ಡೇಶ್, ಬಟ್ಲಕಟ್ಟೆ ಬೀರೇಶ್, ಕೊಗ್ಗನೂರು ಮಂಜಣ್ಣ, ಎಂ.ಡಿ. ನಿಂಗಪ್ಪ, ಎಸ್.ಎಸ್. ರವಿಕುಮಾರ್ ಮಾತನಾಡಿದರು.

ಕೆ.ಎಚ್. ಕುಬೇರಪ್ಪ, ಅಡಿವೆಪ್ಪ, ಉಮೇಶ್, ಲೋಕಪ್ಪ, ಪಿ.ಟಿ. ಹನುಮಂತಪ್ಪ, ಎಂ.ಕೆ. ದಾನಪ್ಪ ಗ್ರಾಮಸ್ಥರು ಇದ್ದರು. ಇಪ್ಟಾ ಕಲಾವಿದ ಲೋಕಿಕೆರೆ ಆಂಜಿನಪ್ಪ ಕ್ರಾಂತಿಗೀತೆ ಹಾಡಿದರು. ಶಿಕ್ಷಕ ಶಂಕರಮೂರ್ತಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.