ADVERTISEMENT

12,502 ಕ್ವಿಂಟಲ್ ಬಿತ್ತನೆಬೀಜ ವಿತರಣೆ

ಬೇಡಿಕೆಯಂತೆ ಸರಬರಾಜು; ರಸಗೊಬ್ಬರ ಕೊರತೆ ಇಲ್ಲ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 6:51 IST
Last Updated 4 ಜೂನ್ 2013, 6:51 IST

ದಾವಣಗೆರೆ: ಜಿಲ್ಲೆಯಲ್ಲಿ ಉತ್ತಮ ಮುಂಗಾರು ಪೂರ್ವ ಮಳೆಯಾಗಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆಬೀಜ ಬೇಡಿಕೆ 46,178 ಕ್ವಿಂಟಲ್ ಇದ್ದು, ಮೇ 31ರವರೆಗೆ 48,755 ಕ್ವಿಂಟಲ್ ಸರಬರಾಜಾಗಿದೆ. ಇದರಲ್ಲಿ 12,505 ಕ್ವಿಂಟಲ್ ಬಿತ್ತನೆಬೀಜ ವಿತರಿಸಲಾಗಿದೆ. 33,676 ಕ್ವಿಂಟಲ್ ಉಳಿಕೆ ದಾಸ್ತಾನು ಲಭ್ಯವಿದೆ.

ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲ 49 ಬಿತ್ತನೆಬೀಜ ಮಾರಾಟ ಕೇಂದ್ರಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಕ್ರಮಕ್ಕೆ ಅವಕಾಶ ನೀಡದಂತೆ ಕ್ರಮ ವಹಿಸಲಾಗಿದೆ. ಬಿತ್ತನೆಬೀಜಗಳ ಕೊರತೆ ಇಲ್ಲ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್.ಜಿ.ಗೊಲ್ಲರ್ ತಿಳಿಸಿದ್ದಾರೆ.

ಜಿಲ್ಲೆಗೆ 24,000 ಕ್ವಿಂಟಲ್ ಮೆಕ್ಕೆಜೋಳ ಬಿತ್ತನೆ ಬೀಜ ಅಗತ್ಯವಿದ್ದು, 63,613 ಕ್ವಿಂಟಲ್ ದಾಸ್ತಾನು ಲಭ್ಯವಿದೆ. ಜೋಳ 1,200 ಕ್ವಿಂಟಲ್ ಅಗತ್ಯವಿದ್ದು, 2,775 ಕ್ವಿಂಟಲ್ ದಾಸ್ತಾನಿದೆ. ಹೈಬ್ರೀಡ್ ಭತ್ತ 10,510 ಕ್ವಿಂಟಲ್ ಬೇಕಾಗಿದ್ದು, ಅಷ್ಟೂ ಪ್ರಮಾಣದ ಬೀಜ ದಾಸ್ತಾನು ಲಭ್ಯವಿದೆ. 15,624 ಭತ್ತದ ಬಿತ್ತನೆಬೀಜ 10,926 ಕ್ವಿಂಟಲ್ ಮಾತ್ರ ದಾಸ್ತಾನು ಇದೆ. ಉಳಿದ ಪ್ರಮಾಣದ ಬಿತ್ತನೆ ಬೀಜ ನಂತರ ಲಭ್ಯವಾಗಲಿದೆ. ಒಟ್ಟಾರೆ ಬಿತ್ತನೆಬೀಜಗಳು ಕೊರೆತೆಯಾಗದಂತೆ ನೋಡಿಕೊಳ್ಳ ಲಾಗುವುದು ಎಂದು ಹೇಳಿದ್ದಾರೆ.

ಜಿಲ್ಲೆಗೆ ಯೂರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಎಸ್‌ಎಸ್‌ಪಿ ರಸಗೊಬ್ಬರ ಒಟ್ಟು 1,24,370 ಟನ್ ಮುಂಗಾರು ಬೇಡಿಕೆಯಿದೆ. 51,715 ಟನ್‌ನಷ್ಟು ಕಾಪು ದಾಸ್ತಾನು ಇಡಲಾಗಿದೆ. ಒಟ್ಟು 6,186 ಟನ್ ಸರಬರಾಜಾಗಿದ್ದು, 10,070 ಟನ್ ಮಾರಾಟವಾಗಿದೆ. ಒಟ್ಟು 53,809 ಟನ್ ದಾಸ್ತಾನು ಲಭ್ಯವಿದೆ. ದಾವಣಗೆರೆ ತಾಲ್ಲೂಕಿಗೆ 22,387 ಟನ್, ಹರಿಹರಕ್ಕೆ 18,656 ಟನ್, ಹರಪನಹಳ್ಳಿಗೆ 21,143, ಹೊನ್ನಾಳಿ 24,874, ಜಗಳೂರು ತಾಲ್ಲೂಕಿನಲ್ಲಿ 9,950 ಟನ್ ಮುಂಗಾರು ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ನಿಗದಿಯಂತೆ ಸರಬರಾಜು ಆಗುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.