ಹೊನ್ನಾಳಿ: ತಾಲ್ಲೂಕಿನ ಸೊರಟೂರಿನಲ್ಲಿ ಗುರುವಾರ ಎತ್ತಿನಗಾಡಿಗೆ ಆಮ್ನಿ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ 16 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ 7 ಮಂದಿಯ ಸ್ಥಿತಿ ಗಂಭೀರವಾಗಿದೆ. ಒಂದು ಹೋರಿ ಮೃತಪಟ್ಟಿದ್ದು, ಇನ್ನೊಂದು ಹೋರಿಯ ಒಂದು ಕೊಂಬು ಮುರಿದಿದೆ.
ಶಿಕಾರಿಪುರದ ಸಾಯಿ ಎಕ್ಸ್ಪೋರ್ಟ್ನಲ್ಲಿ ಕೆಲಸ ಮಾಡುತ್ತಿದ 13 ಮಂದಿ ಕೆಲಸ ಮುಗಿಸಿ ಆಮ್ನಿಯಲ್ಲಿ ಬರುತ್ತಿದ್ದರು. ಹೊಲದ ಕೆಲಸ ಮುಗಿಸಿಕೊಂಡು ಒಂದೇ ಕುಟುಂಬದ ಮೂವರು ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅಪಘಾತ ಉಂಟಾಗಿದೆ. ಒಂದೇ ಕುಟುಂಬದ 3 ಜನ ಬರುತ್ತಿದ್ದಾಗ ಈ ಅಪಘಾತ ಜರುಗಿದೆ. ಶಿಕಾರಿಪುರದ ಗಾರ್ಮೆಂಟ್ಸ್ನಲ್ಲಿ ಕೆಲಸ ಮುಗಿಸಿ ಹೊನ್ನಾಳಿ ತಾಲ್ಲೂಕಿನ ಮಾಸಡಿ, ಬೇಲಿಮಲ್ಲೂರು ಮತ್ತು ಹಿರೇಕೆರೂರು ತಾಲ್ಲೂಕಿನ ಹಳ್ಳುರು ಗ್ರಾಮದವರು ಆಮ್ನಿ ವಾಹನದಲ್ಲಿ ಇದ್ದರು.
ಅಪಘಾತವಾದ ತಕ್ಷಣ ಚಾಲಕ ಗಾಯಾಳುಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಗಂಭೀರ ಗಾಯಗೊಂಡಿರುವ ಏಳು ಮಂದಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಹಾಗೂ ಉಳಿದವರನ್ನು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಸಿಪಿಐ ಟಿ.ವಿ. ದೇವರಾಜ್, ಪಿಎಸ್ಸೈ ಬಸನಗೌಡ ಬಿರಾದಾರ, ಸಿಬ್ಬಂದಿ ಮಾಲತೇಶ್, ಮಂಜುನಾಥ್, ಗಣೇಶ್, ಚೇತನ್, ಹನುಮಂತಪ್ಪ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.