ADVERTISEMENT

ದಾವಣಗೆರೆ: ಜನರಲ್ಲಿ ಆತಂಕ ತಂದ ಗೂಳಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 16:07 IST
Last Updated 20 ಆಗಸ್ಟ್ 2021, 16:07 IST
ದಾವಣಗೆರೆಯ ಗಾಂಧಿನಗರದಲ್ಲಿ ಶುಕ್ರವಾರ ಜನರನ್ನು ಬೆದರಿಸಿ ಆತಂಕ ಸೃಷ್ಟಿಸಿದ ಗೂಳಿ
ದಾವಣಗೆರೆಯ ಗಾಂಧಿನಗರದಲ್ಲಿ ಶುಕ್ರವಾರ ಜನರನ್ನು ಬೆದರಿಸಿ ಆತಂಕ ಸೃಷ್ಟಿಸಿದ ಗೂಳಿ   

ದಾವಣಗೆರೆ: ನಗರದ ಗಾಂಧಿನಗರದಲ್ಲಿ ಮಧ್ಯಾಹ್ನ 3ರ ಹೊತ್ತಿಗೆ ಗೂಳಿಯೊಂದು ಜನರನ್ನು ಬೆದರಿಸಿ ಆತಂಕ ಸೃಷ್ಟಿಸಿತ್ತು.

ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ಗೂಳಿ ರಸ್ತೆ ತುಂಬೆಲ್ಲಾ ಓಡಾಡಿತು. ಕಂಡ ಕಂಡವರಿಗೆ ಗುದ್ದಲು ಹೋಯಿತು. ಇದರಿಂದ ಗಾಬರಿಯಾದ ಜನರು ಮನೆಯೊಳಗೆ ಸೇರಿಕೊಂಡರು, ಕೆಲವರು ಮನೆಯ ಗೇಟಿನ ಬಾಗಿಲು ಹಾಕಿಕೊಂಡರು. ಕೆಲವರು ಕಿಟಕಿಯಲ್ಲಿ ನಿಂತು ಗೂಳಿಯ ಅಬ್ಬರ ವೀಕ್ಷಿಸಿದರು.

ಗಾಂಧಿನಗರ, ಆಜಾದ್ ನಗರ, ಅಹ್ಮದ್ ನಗರ ಸೇರಿ ಹಲವೆಡೆ ಅಬ್ಬರಿಸುತ್ತಾ ಓಡಾಡಿದ ಗೂಳಿ ಜನರಲ್ಲಿ ಭಯ ಉಂಟುಮಾಡಿತು. ರಸ್ತೆಯಲ್ಲಿ ಹೋಗುತ್ತಿದ್ದ ಮಕ್ಕಳು, ಯುವಕರು ಗೂಳಿ ಆರ್ಭಟಕ್ಕೆ ಹೆದರಿ ಓಡಿದರು.

ADVERTISEMENT

ಗೂಳಿಯ ಆರ್ಭಟ ಜೋರಾಗುತ್ತಿದ್ದಂತೆ ಜನರು ಗಾಂಧಿನಗರ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಉಪಾಯ ಮಾಡಿ, ಕಚೇರಿಯೊಂದರ ಕಾಂಪೌಂಡ್‌ ಒಳಗೆ ನಿಂತು ಸ್ಥಳೀಯರ ಸಹಕಾರದಿಂದ ಹಗ್ಗದ ಮೂಲಕ ಗೂಳಿಯನ್ನು ಹಿಡಿದು ಜನರ ಆತಂಕ ದೂರ ಮಾಡಿದರು.ಯಾರಿಗೂ ಅಪಾಯವಾಗಿಲ್ಲ.

‘ಸಿಬ್ಬಂದಿ ಹರಸಾಹಸ ಪಟ್ಟು ಗೂಳಿಯನ್ನು ಹಿಡಿದರು. ಗಾಂಧಿನಗರ ಪೊಲೀಸ್‌ ಠಾಣೆಯಲ್ಲಿ ಸಂಜೆಯವರೆಗೆ ಗೂಳಿಯನ್ನು ಕಟ್ಟಿ ಹಾಕಲಾಗಿತ್ತು. ಪಶು ವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಿದ ಬಳಿಕಬಂದ ಪಶು ವೈದ್ಯರು ಗೂಳಿಯನ್ನು ಸಮೀಪದ ಗೋಶಾಲೆಗೆ ರವಾನಿಸಿದರು’ ಎಂದು ಗಾಂಧಿನಗರ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.