ದಾವಣಗೆರೆ: ಮುಳುಗಾಯಿ (ಬದನೆ) ಬೆಳೆಯಲು ಮಾಡಿದ ವೆಚ್ಚದಷ್ಟೂ ಬೆಲೆ ಸಿಕ್ಕಿಲ್ಲ ಎಂದು ನೊಂದ ರೈತರೊಬ್ಬರು ಅಷ್ಟೂ ಬೆಳೆಯನ್ನು ಧರ್ಮಸ್ಥಳದ ಮಂಜುನಾಥ ಸ್ವಾಮಿ ಕ್ಷೇತ್ರಕ್ಕೆ ಬುಧವಾರ ಕಳುಹಿಸಿಕೊಟ್ಟಿದ್ದಾರೆ.
ತಾಲ್ಲೂಕಿನ ರಾಂಪುರ ಗ್ರಾಮದ ರೈತರಾಜ್ಯ ರೈತ ಸಂಘದ ಉಪಾಧ್ಯಕ್ಷ ಆರ್.ಜಿ.ಬಸವರಾಜ ಅವರು ಎರಡು ಎಕರೆಯಲ್ಲಿ ಮುಳುಗಾಯಿ ಬೆಳೆದಿದ್ದರು. ಈಗ ಫಸಲು ಬಂದಿದೆ. ಕೊಯ್ದು ಮಾರುಕಟ್ಟೆಗೆ ಒಯ್ದರೆ ಕೆ.ಜಿ.ಗೆ ₹ 2ರಂತೆ ಕೇಳಿದ್ದರು. ಕೆ.ಜಿ.ಗೆ ಕನಿಷ್ಠ ₹ 10 ಸಿಗದೇ ಇದ್ದರೆ ಅಸಲು ಕೂಡ ಸಿಗುವುದಿಲ್ಲ ಎಂದು ಮಾರಾಟ ಮಾಡದೇ ವಾಪಸ್ಸಾದ ಬಸವರಾಜ್ ಅವರು ಧರ್ಮಸ್ಥಳಕ್ಕೆ ನೀಡಲು ನಿರ್ಧರಿಸಿದರು. ಹೆತ್ತವರಾದ ಆರ್.ಜಿ.ಚಂದ್ರಪ್ಪ, ಸರೋಜಮ್ಮ, ಸಹೋದರರಾದ ಆರ್.ಜಿ.ಹನುಮಂತಗೌಡ, ಆರ್.ಜಿ.ಮುನಿಕುಮಾರ, ಅತ್ತಿಗೆ, ಪತ್ನಿ ಜತೆ ಚರ್ಚಿಸಿ ಬುಧವಾರ ರಾತ್ರಿಯೇ ಲಾರಿ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಅವರ 4 ಟನ್ ಮುಳುಗಾಯಿ ಜತೆಗೆ ಸುತ್ತಮುತ್ತಲಿನ ರೈತರೂ ಕೈಜೋಡಿಸಿದ್ದರಿಂದ 5 ಟನ್ ಮುಳುಗಾಯಿಯಾಗಿದೆ.
‘ನಮ್ಮ ಕೈಯಿಂದ ₹ 2ಕ್ಕೆ ಕೇಳುವ ವ್ಯಾಪಾರಸ್ಥರು, ಕಣ್ಣಮುಂದೆಯೇ ಕೆ.ಜಿ.ಗೆ ₹ 20ಕ್ಕೆ ಮಾರಾಟ ಮಾಡುತ್ತಾರೆ. 8-10 ಕೂಲಿಕಾರರನ್ನು ಇಟ್ಟು ಕಿತ್ತಿರುವ ವೆಚ್ಚವೂ ಬರುವುದಿಲ್ಲ. ಮಂಜುನಾಥನ ಕ್ಷೇತ್ರಕ್ಕೆ ಬಂದವರಾದರೂ ತಿನ್ನಲಿ ಎಂದು ನಾವೇ ₹ 9 ಸಾವಿರಕ್ಕೆ ಲಾರಿ ಮಾಡಿ, ಅದಕ್ಕೆ ಲೋಡ್ ಮಾಡಿ ಕಳುಹಿಸಿದ್ದೇವೆ’ ಎಂದು ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.