ದಾವಣಗೆರೆ: ಆಸ್ತಿಗಾಗಿ ಎರಡೂವರೆ ವರ್ಷದ ಮಗನನ್ಬು ಕೊಲೆ ಮಾಡಿದ ತಂದೆಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಜಗಳೂರು ತಾಲ್ಲೂಕಿನ ಕಡಬನಕಟ್ಟೆ ರಾಘವೇಂದ್ರ ಶಿಕ್ಷೆಗೆ ಗುರಿಯಾದ ಆರೋಪಿ. ಈತನಿಗೆ ಸಿದ್ದಿಹಳ್ಳಿ ಗ್ರಾಮದ ಅರ್ಪಿತಾ ಎಂಬಾಕೆಯ ಜೊತೆ ವಿವಾಹವಾಗಿತ್ತು. ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ.
ದುಶ್ಚಟಗಳಿಗೆ ಬಲಿಯಾಗಿ ತನ್ನ ಆಸ್ತಿಯನ್ನು ಮಾರಾಟ ಮಾಡಿದ್ದ . ಪತ್ನಿ ಅರ್ಪಿತಾ ತನ್ನ ಏಕೈಕ ಪುತ್ರ ಪ್ರಣವ್ ಕೃಷ್ಣನಿಂದ ಪಾಲು ವಿಭಾಗದ ದಾವೆ ಸಲ್ಲಿಸಿದ್ದರು.
ಆರೋಪಿ ರಾಘವೇಂದ್ರ ಆಸ್ತಿ ಆಸೆಗಾಗಿ ಫೆ.23, 2017ರಂದು ಪ್ರಣವ್ ಕೃಷ್ಣನನ್ನು ಕೊಲೆ ಮಾಡಿದ್ದ. ಅಂದಿನ ಜಗಳೂರು ಸರ್ಕಲ್ ಇನ್ ಸ್ಪೆಕ್ಟರ್ ಲತಾ ಬಿ.ಕೆ. ಅವರು ತನಿಖೆ ಮಾಡಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಕೆಂಗಬಾಲಯ್ಯ ಜೀವಾವಧಿ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.