ADVERTISEMENT

ಬಸವಾಪಟ್ಟಣ: ವಾಡಿಕೆಗಿಂತ ಹೆಚ್ಚು ಮಳೆ, ಅಪರೂಪವಾದ ಸೊಗಡಿನ ಅವರೆ

ಎನ್.ವಿ.ರಮೇಶ್
Published 17 ಡಿಸೆಂಬರ್ 2021, 3:51 IST
Last Updated 17 ಡಿಸೆಂಬರ್ 2021, 3:51 IST
ಬಸವಾಪಟ್ಟಣದ ಪಿ.ನೌಷಾದ್ ಅಹಮದ್ ತಾವು ಬೆಳೆದ ಸೊಗಡಿನ ಅವರೆ ಕಾಯಿಯೊಂದಿಗೆ
ಬಸವಾಪಟ್ಟಣದ ಪಿ.ನೌಷಾದ್ ಅಹಮದ್ ತಾವು ಬೆಳೆದ ಸೊಗಡಿನ ಅವರೆ ಕಾಯಿಯೊಂದಿಗೆ   

ಬಸವಾಪಟ್ಟಣ: ಘಂ ಎಂದು ವಾಸನೆ ಬೀರುವ, ಹಿಡಿದರೆ ಎಣ್ಣೆಯಂತಹ ದ್ರವ ಕೈಗೆ ಮೆತ್ತುವ ಸೊಗಡಿನ ಅವರೆ, ಈ ವರ್ಷ ಮರೆಯಾಗಿದೆ.ವಾಡಿಕೆಗಿಂತ ಹೆಚ್ಚಾಗಿ ಸುರಿದ ಮಳೆಯಿಂದ ಸೊಗಡಿನ ಅವರೆಯ ಘಮಲು ಈ ಬಾರಿ ಬರುತ್ತಿಲ್ಲ.

‘ಒಂದು ಎಕರೆಯಲ್ಲಿ ಈ ವರ್ಷ ಈ ಸೊಗಡಿನ ಅವರೆ ಬಿತ್ತನೆ ಮಾಡಿದ್ದೆ. ಪ್ರತಿ ವರ್ಷ ನವೆಂಬರ್‌ ಎರಡನೇ ವಾರದಲ್ಲಿ ಆರಂಭವಾಗಿ ಮಾರ್ಚ್‌ 15ರ ವರೆಗೆ ಸಮೃದ್ಧವಾಗಿ ಬರುತ್ತಿದ್ದ ಅವರೆ ಈ ವರ್ಷ ಡಿಸೆಂಬರ್‌ ಎರಡನೇ ವಾರವಾದರೂ ಕೈಗೆ ಬಂದಿಲ್ಲ. ಇಡೀ ಹೊಲದಲ್ಲಿ ತಿರುಗಾಡಿದರೂ ಐದು ಕೆ.ಜಿಯಷ್ಟೂ ಸಿಕ್ಕಿಲ್ಲ’ ಎಂದರು ರೈತ ನೌಷಾದ್‌ ಅಹಮದ್‌.

‘ಪ್ರತಿ ವರ್ಷ ಎಕರೆಗೆ ಎರಡು ಟನ್‌ ಅವರೆ ಬೆಳೆಯುತ್ತಿದ್ದೆ. ಈ ಸೊಗಡಿನ ಅವರೆಗೆ ಭಾರೀ ಬೇಡಿಕೆ ಇದ್ದು, ಮುಂಜಾನೆ ಬಿಡಿಸಿಕೊಂಡು ಹೋಗಿ ಗ್ರಾಮದ ಪೇಟೆ ಬೀದಿಯಲ್ಲಿ ಸುರಿಯುತ್ತಿದ್ದಂತೆ ಜನ ಮುಗಿ ಬಿದ್ದು ಖರೀದಿಸುತ್ತಿದ್ದರು. ಒಂದು ಗಂಟೆಯಲ್ಲಿ ಎರಡು ಕ್ವಿಂಟಲ್‌ ಅವರೆ ಮಾರಾಟವಾಗುತ್ತಿತ್ತು. ಆದರೆ ಈ ವರ್ಷ ಬೆಳೆಯೇ ಇಲ್ಲ. ಚಳಿ ಬಿದ್ದರೆ ಈ ಅವರೆ ಸೊಂಪಾಗಿ ಬರುತ್ತದೆ. ನವೆಂಬರ್‌ ಮೂರನೇ ವಾರವಾದರೂ ಚಳಿ ಆರಂಭವಾಗಿಲ್ಲ. ಮುಂದಿನ ಮೂರು ತಿಂಗಳಲ್ಲಿ ಒಂದು ಎಕರೆಗೆ ಕೇವಲ ಐದು ಕ್ವಿಂಟಲ್‌ ಕೈಗೆ ಸಿಕ್ಕರೆ ನನ್ನ ನಸೀಬು. ಹಾಕಿದ ಬಂಡವಾಳವೂ ಇಲ್ಲ’ ಎಂದು ಬೇಸರಿಸಿದರು ಅವರು.

ADVERTISEMENT

‘ಈ ವರ್ಷ ಎಲ್ಲರೂ ಇಲ್ಲಿನ ಸೊಗಡಿನ ಅವರೆ ಕೇಳುತ್ತಿದ್ದಾರೆ. ಆ ಬೆಳೆಯೇ ಇಲ್ಲವಾಗಿದ್ದು, ಸೊಗಡಿಲ್ಲದ ಮಾಳದ ಅವರೆಯನ್ನು ಕೊಂಡು ತಂದು ಮಾರುತ್ತಿದ್ದೇವೆ. ಜನರಿಗೆ ಅವರೆ ಕಾಯಿ ತಿಂದೆವು ಎಂಬ ಸಮಾಧಾನವಾಗಬೇಕಷ್ಟೇ’ ಎನ್ನುತ್ತಾರೆ ಇಲ್ಲಿನ ತರಕಾರಿ ವ್ಯಾಪಾರಿಗಳಾದ ಅಮಜದ್‌ ಸಾಬ್‌ ಮತ್ತು ಸಖಲೀನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.