ಉಚ್ಚಂಗಿದುರ್ಗ: ಇಲ್ಲಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಉಚ್ಚೆಂಗೆಮ್ಮದೇವಿ ದೇವಸ್ಥಾನದಲ್ಲಿ ಬುಧವಾರ ಕಾಣಿಕೆ ಹುಂಡಿ ಎಣಿಕೆಯಲ್ಲಿ ₹ 15,43,333 ಸಂಗ್ರಹವಾಗಿದೆ.ಹುಂಡಿಯಲ್ಲಿ ಭಕ್ತರ ಹರಕೆ ಪತ್ರಗಳು ಗಮನ ಸೆಳೆದವು.
ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರ ವರೆಗೆ ನಡೆದ ಎಣಿಕೆ ಕಾರ್ಯದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಉಚ್ಚೆಂಗೆಮ್ಮ ದೇವಿ ದಾಸೋಹ ಕಾರ್ಯಕ್ರಮಕ್ಕೆ ಮೀಸಲಿಟ್ಟ ಪ್ರತ್ಯೇಕ ಹುಂಡಿ ಎಣಿಕೆಯಲ್ಲಿ ₹1,67,017 ಸಂಗ್ರಹವಾಗಿದೆ. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ದಿನಗಳಲ್ಲಿ ದಾಸೋಹ ನಡೆಸಲಾಗುತ್ತದೆ. ಆದರೆ ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ವಿಧಿಸಿದ್ದ ಲಾಕ್ಡೌನ್ ಕಾರಣ ದಾಸೋಹವನ್ನು ಸರ್ಕಾರದ ಮುಂದಿನ ಸೂಚನೆವರೆಗೂ ಸ್ಥಗಿತಗೊಳಿಸಲಾಗಿದೆ.
ಉಚ್ಚೆಂಗೆಮ್ಮ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.
ಹರಕೆ ಪತ್ರ: ಹುಂಡಿಯಲ್ಲಿ ಭಕ್ತರ ಹರಕೆ ಪತ್ರಗಳು ಗಮನ ಸೆಳೆದವು. ಭಕ್ತರೊಬ್ಬರು ‘ಡಿಗ್ರಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ಉತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ಸರ್ಕಾರಿ ಉದ್ಯೋಗ ಸಿಕ್ಕರೆ ಒಂದು ಸೀರೆ, ಜಾಕೆಟ್, ಬಳೆ, ಹೂವಿನ ಹಾರದ ಜೊತೆಗೆ ₹ 1001 ಕಾಣಿಕೆ ನೀಡುವುದಾಗಿ ಹರಕೆ ಹೊತ್ತಿದ್ದಾರೆ. ಮತ್ತೊಬ್ಬರು, ‘ಹೋಟೆಲ್ ಉದ್ಯಮದಲ್ಲಿ ದುಡಿದ ಹಣ ಕೈ ಸೇರುತ್ತಿಲ್ಲ. ಉದ್ಯಮ ಸುಸ್ಥಿರಗೊಂಡು ಸಾಲ ಸಮಸ್ಯೆ ಬಗೆಹರಿಯಲಿ. ಕುಟುಂಬಕ್ಕೆ ಆರೋಗ್ಯ ಐಶ್ವರ್ಯ ಸಿಗುವಂತೆ ಮಾಡು ತಾಯೆ, ನನ್ನ ಬೇಡಿಕೆಯಲ್ಲಿ ತಪ್ಪಿದ್ದಲಿ ಕ್ಷಮಿಸು’ ಎಂದು ಕೇಳಿಕೊಂಡಿದ್ದಾರೆ.
ಮುಜರಾಯಿ ಇಲಾಖೆ ಸಿಬ್ಬಂದಿ ಶಾಂತಮ್ಮ, ಉಪ ತಹಶೀಲ್ದಾರ್ ಫಾತಿಮಾ, ಬ್ಯಾಂಕ್ ವ್ಯವಸ್ಥಾಪಕ ಸೋಮಶೇಖರ್, ಸಿಬ್ಬಂದಿ ರಾಘವೇಂದ್ರ, ಮಲ್ಲಿಕಾರ್ಜುನ ಪೊಲೀಸ್ ಇಲಾಖೆ ರಾಮಚಂದ್ರಪ್ಪ, ರವಿ ಕುಮಾರ್, ಹನುಮಂತನಾಯ್ಕ ಮುಜರಾಯಿ ಇಲಾಖೆ ಗುಮಾಸ್ತ ತೆಗ್ಗಿನಮನೆ ರಮೇಶ್, ಕಂದಾಯ ಇಲಾಖೆ ಸಿಬ್ಬಂದಿ ಮಂಜುನಾಥ್, ಶ್ರೀಕಾಂತ್, ವಿಶ್ವನಾಥ್, ಅರ್ಚಕ ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.