
ದಾವಣಗೆರೆಯ ಕಲಾ ಗ್ಯಾಲರಿಯಲ್ಲಿ ಆಯೋಜಿಸಿರುವ ‘ವರ್ಣ ವಿಕಾಸ’ ಚಿತ್ರಕಲಾ ಪ್ರದರ್ಶನವನ್ನು ಮಂಡ್ಯ ರಮೇಶ್ ಉದ್ಘಾಟಿಸಿ ಕಲಾಕೃತಿಗಳನ್ನು ವೀಕ್ಷಿಸಿದರು ಪ್ರಜಾವಾಣಿ ಚಿತ್ರ
ದಾವಣಗೆರೆ: ‘ನಾಟಕಗಳಲ್ಲಿ ದೃಶ್ಯ ವೈಭವ ಇದ್ದರೂ, ಅಭಿನಯ ಎಂಬ ಅಧ್ಯಾತ್ಮ ಇಲ್ಲದಿದ್ದರೆ ಪ್ರಯೋಜನವಿಲ್ಲ’ ಎಂದು ಚಲನಚಿತ್ರ ನಟ, ರಂಗಕರ್ಮಿ ಮಂಡ್ಯ ರಮೇಶ್ ಅಭಿಪ್ರಾಯಪಟ್ಟರು.
ಇಲ್ಲಿನ ದೃಶ್ಯಕಲಾ ಮಹಾವಿದ್ಯಾಲಯದ ಕಲಾ ಗ್ಯಾಲರಿಯಲ್ಲಿ ಕಲಾವಿದ ಅಶೋಕ ಯು. ಅವರ ‘ವರ್ಣ ವಿಕಾಸ’ ಚಿತ್ರಕಲಾ ಪ್ರದರ್ಶನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ‘ರಂಗಭೂಮಿಯು ಅತ್ಯಂತ ಸರಳ ಮತ್ತು ಸೌಂದರ್ಯದಿಂದ ಕೂಡಿದ ಮಾಧ್ಯಮವಾಗಿದೆ’ ಎಂದರು.
‘ಕಲಾವಿದ ಅಶೋಕ ಯು. ಅವರ ರೇಖಾಚಿತ್ರಗಳಲ್ಲಿ ಸರಳತೆಯೇ ಸೌಂದರ್ಯವಾಗಿದ್ದು, ಆಳವಾದ ಅರಿವು ಮತ್ತು ಮನಸ್ಸಿನ ಶ್ರೀಮಂತಿಕೆಯನ್ನು ಬಿಂಬಿಸುತ್ತವೆ’ ಎಂದರು.
‘ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲೆಗೆ ಆದ್ಯತೆ ಕೊಟ್ಟಿರುವಂತೆ ಮುಂದಿನ ದಿನಗಳಲ್ಲಿ ರಂಗಭೂಮಿ, ಜಾನಪದ ಪ್ರಕಾರಗಳಿಗೂ ಆದ್ಯತೆ ನೀಡಬೇಕು. ರಂಗಭೂಮಿ ಸದಾ ಜೀವಂತವಾಗಿರಲಿ’ ಎಂದು ಆಶಿಸಿದರು.
‘ರಂಗಭೂಮಿಗೂ ಚಿತ್ರಕಲೆಗೂ ಅವಿನಾಭಾವ ಸಂಬಂಧವಿದೆ. ಮುಂದಿನ ದಿನಗಳಲ್ಲಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಚಿತ್ರಕಲೆಗೆ ಸಂಬಂಧಿಸಿದ ಪ್ರದರ್ಶನ ಏರ್ಪಡಿಸಲಾಗುವುದು’ ಎಂದು ಅನ್ವೇಷಕರು ಆರ್ಟ್ ಫೌಂಡೇಷನ್ ಟ್ರಸ್ಟಿ ಸಿದ್ಧರಾಜು ಎಸ್.ಎಸ್. ತಿಳಿಸಿದರು.
ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಸತೀಶ್ ಕುಮಾರ್ ಪಿ.ವಲ್ಲೇಪುರೆ ಅಧ್ಯಕ್ಷತೆ ವಹಿಸಿದ್ದರು.
ಸರ್.ಎಂ.ವಿ. ಪಿಯು ಕಾಲೇಜಿನ ಕಾರ್ಯದರ್ಶಿ ಎಸ್.ಜೆ ಶ್ರೀಧರ್, ಕಲಾವಿದ ಅಶೋಕ ಯು., ಚಿತ್ರಕಲಾ ಶಿಕ್ಷಕ ರಾಘವೇಂದ್ರ ನಾಯಕ ಎನ್.ಟಿ. ಉಪಸ್ಥಿತರಿದ್ದರು. ಕಲಾ ವಿಮರ್ಶಕ ದತ್ತಾತ್ರೇಯ ಎನ್. ಭಟ್ಟ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.