ದಾವಣಗೆರೆ: ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಸಮಾಜಕ್ಕೆ ಪೂರಕವಾದ ಕೆಲಸ ಮಾಡಬೇಕು. ಮಧ್ಯವರ್ತಿಗಳ ಹಾವಳಿ ಇದ್ದರೆ ನನ್ನ ಗಮನಕ್ಕೆ ತನ್ನಿ. ಮುಲಾಜಿಲ್ಲದೇಕ್ರಮ ಕೈಗೊಳ್ಳಲಾಗುವುದು. ಮಧ್ಯವರ್ತಿಗಳಿಗೆ ಅಧಿಕಾರಿಗಳು ಸಾಥ್ ನೀಡಿದರೆ ಅವರ ವಿರುದ್ಧ ಇಲಾಖಾ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ನಿರ್ದೇಶಕ ಮಡಿವಾಳ ಕಾರ್ಕಳ ಎಚ್ಚರಿಕೆ ನೀಡಿದರು.
ಶನಿವಾರ ವಿನೋಬನಗರದಲ್ಲಿರುವ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಈ ಹಿಂದೆ ಮಡಿವಾಳ ಸಮಾಜವು ಹಿಂದುಳಿದ ಅಭಿವೃದ್ಧಿ ನಿಗಮದಲ್ಲಿ ಇತ್ತು. ಅಲ್ಲಿ 102 ಜಾತಿಗಳು ಇವೆ. ಈ ನಿಟ್ಟಿನಲ್ಲಿ ಮಡಿವಾಳ ಸಮಾಜದ ಅಭಿವೃದ್ಧಿಗಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಮಡಿವಾಳ ಸಮಾಜ ಸೇರಿ 7 ನಿಗಮಗಳನ್ನು ಸ್ಥಾಪಿಸುವ ಮೂಲಕ ಹಿಂದುಳಿದ ಜಾತಿಗಳನ್ನು ಮೇಲೆತ್ತಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ನಿಗಮದಲ್ಲಿ ಸಾಂಪ್ರದಾಯಿಕವಾಗಿ ಕುಲಕಸುಬು ಮಾಡುವ ವ್ಯಕ್ತಿಗಳಿಗೆ, ಉದ್ದಿಮೆ ಮಾಡುವ ವ್ಯಕ್ತಿಗಳಿಗೆ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ವಿದ್ಯಾಸಿರಿ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ವಿವಿಧ ಯೋಜನೆಗಳು ಸೇರಿ ಒಟ್ಟು 8,847 ಫಲಾನುಭವಿಗಳಿಗೆ 30 ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಅಡಿ ಸಾಲಸೌಲಭ್ಯ ನೀಡಲಾಗುವುದು ಎಂದರು.
ಸರ್ಕಾರದಿಂದ ನೀಡಲಾಗುತ್ತಿರುವ ಸಾಲಸೌಲಭ್ಯ ದುರುಪಯೋಗವಾಗಿದ್ದರೆ ಅಂಥವರ ಮೇಲೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಡಿವಾಳ ಸಮಾಜದ ರಾಜ್ಯ ಘಟಕದ ಅಧ್ಯಕ್ಷೆ ಪದ್ಮಾ ವರ್ತೂರ್, ‘ಮಹಿಳೆಯರು ಸಂಘಟಿತರಾಗಿ ಬೀದಿಗಿಳಿದು ಮೀಸಲಾತಿಗಾಗಿ ಹೋರಾಟ ಮಾಡಬೇಕಾಗಿದೆ. ಮನೆಯಲ್ಲಿ ಕೂರದೆ ಮನೆಗೆಲಸದ ಜೊತೆಯಲ್ಲೂ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಸಂಘದ ಅಧ್ಯಕ್ಷ ಎಂ.ನಾಗೇಂದ್ರಪ್ಪ, ಕಾರ್ಯಾಧ್ಯಕ್ಷ ಆವರಗೆರೆ ಎಚ್.ಜಿ. ಉಮೇಶ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಾಗಮ್ಮ ಮಾತನಾಡಿದರು. ಜಿಲ್ಲಾ ಸಂಘದ ಪದಾಧಿಕಾರಿಗಳಾದ ಪಿ. ಮಂಜುನಾಥ್, ಎಂ.ಆರ್. ಧನಂಜಯ ವಿಜಯಕುಮಾರ್, ಸುರೇಶ್ ಕೋಗುಂಡೆ, ಅಜ್ಜಯ್ಯ, ಎಂ.ವೈ. ಸತೀಶ್, ಅಂಜಿನಪ್ಪ ಪೂಜಾರ್, ಚಿಕ್ಕಣ್ಣ, ಸುಭಾಷ್, ಯೋಗಗುರು ಪರಶುರಾಮ್, ಭೀಮಣ್ಣ ಮಡಿವಾಳ, ಮಡಿಕಟ್ಟೆ ಯುವಕರ ಸಂಘದ ಅಧ್ಯಕ್ಷ ಫಕ್ಕೀರಸ್ವಾಮಿ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.