ADVERTISEMENT

ಅನುದಾನಿತ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಕ್ರಮ: ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 16:35 IST
Last Updated 23 ಜನವರಿ 2024, 16:35 IST
ಶ್ರೀರಾಂಪುರ ಹೋಬಳಿ ಬೆಲಗೂರು ಗ್ರಾಮದಲ್ಲಿ ನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಮಂಗಳವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು
ಶ್ರೀರಾಂಪುರ ಹೋಬಳಿ ಬೆಲಗೂರು ಗ್ರಾಮದಲ್ಲಿ ನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಮಂಗಳವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು   

ಶ್ರೀರಾಂಪುರ: ‘ಅನುದಾನಿತ ಶಾಲೆಗಳಲ್ಲಿ 8 ವರ್ಷಗಳಿಂದ ಶಿಕ್ಷಕರ ನೇಮಕಾತಿ ಮಾಡಿಕೊಂಡಿಲ್ಲ. ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರಿದ್ದು. ಸದ್ಯದಲ್ಲಿಯೇ ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶಿಕ್ಷಕರ ಕೊರತೆ ನೀಗಿಸಲು ಕ್ರಮ ವಹಿಸಲಾಗುವುದು’ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.

ಹೋಬಳಿಯ ಬೆಲಗೂರು ಗ್ರಾಮದ ಗಂಗಮ್ಮ ಭೀಮೋಜಪ್ಪ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

‘ಅನುದಾನಿತ ಶಾಲೆಗಲ್ಲಿನ ಸಮಸ್ಯೆ ತಿಳಿದಿದೆ. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದೇನೆ. ಶಿಕ್ಷಣ ಇಲಾಖೆಯಲ್ಲಿ ಬಹಳ ಸಮಸ್ಯೆ ಇದೆ. ಇದು ಹಿಂದಿನ ಸರ್ಕಾರದ ಬಳುವಳಿಯಾಗಿದ್ದು ಎಲ್ಲರ ಸಹಕಾರದಿಂದ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ. ಒಪಿಎಸ್ ಸಮಸ್ಯೆ ಬಗೆಹರಿಸಲು ಕಾಲಾವಕಾಶ ಬೇಕು’ ಎಂದರು.

ADVERTISEMENT

‘ಮಕ್ಕಳ ಕೈಯಲ್ಲಿ ಪೆನ್ನು ಇರಬೇಕು ಪೊರಕೆ ಇರಬಾರದು. ಹಾಗೆಯೇ ಶಿಕ್ಷಕರ ಕೈಯಲ್ಲೂ ಪೊರಕೆ ಇರಬಾರದು. ಶಾಲೆಗಳಲ್ಲಿನ ಸ್ವಚ್ಛತೆಗೆ ಅನುದಾನ ನೀಡಲಾಗುವುದು. ಮುಂದಿನ 3 ವರ್ಷಗಳಲ್ಲಿ ಪ್ರತಿ 2 ಗ್ರಾಮ ಪಂಚಾಯಿತಿಗೆ ಒಂದರಂತೆ ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು’ ಎಂದರು.

ಶಾಸಕ ಬಿ.ಜಿ.ಗೋವಿಂದಪ್ಪ, ಸಚಿವ ಡಿ.ಸುಧಾಕರ್ ಮಾತನಾಡಿದರು.

ಬೆಲಗೂರು ಮಾರುತಿ ಪೀಠದ ವಿಜಯ ಮಾರುತಿ ಶರ್ಮಾ ಸಾನ್ನಿಧ್ಯ ವಹಿಸಿದ್ದರು. ಕಟ್ಟಡ ದಾನಿಗಳಾದ ಬಿ.ಎಂ.ವಸಂತ ಕುಮಾರ್ ಅವರ ಸಹೋದರ ಸತೀಶ್ ದಂಪತಿಯನ್ನು ಸನ್ಮಾನಿಸಲಾಯಿತು.

ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ಬಿಇಒ ಸಯ್ಯದ್ ಮೊಸೀನ್, ಮಾಜಿ ಸಂಸದ ಚಂದ್ರಪ್ಪ, ಕೆಪಿಸಿಸಿ ಸದಸ್ಯರಾದ ಎಂ.ಪಿ. ಶಂಕರ್, ಅಲ್ತಾಪ್ ಪಾಷ, ಜವಳಿ ನಿಗಮದ ಮಾಜಿ ಅಧ್ಯಕ್ಷ ಗೋ ತಿಪ್ಪೇಶ್, ಸಂಸ್ಥೆಯ ಗೌರವಾಧ್ಯಕ್ಷ ಸುರೇಶ್ ಬಾಬು, ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

3 ಗಂಟೆ ತಡವಾಗಿ ಬಂದ ಸಚಿವರು:

ಸಚಿವರು ಸುಮಾರು 3 ಗಂಟೆ ತಡವಾಗಿ ಬಂದಿದ್ದರಿಂದ ಮಧ್ಯಾಹ್ನ 2 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸಂಜೆ 5 ಗಂಟೆಗೆ ಶುರುವಾಯಿತು. ಸಚಿವರ ಸ್ವಾಗತಕ್ಕಾಗಿ ಮಕ್ಕಳು 3 ಗಂಟೆಗಳ ಕಾಲ ಕಾಯುವಂತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.