ಹರಿಹರ: ತಾಲ್ಲೂಕಿನ ಹೊಳೆಸಿರಿಗೆರೆ ಗ್ರಾಮದ ಯುವ ರೈತ ಕುಂದೂರು ಮಂಜಪ್ಪ ಅವರ ಕುಟುಂಬ ಕೃಷಿಯಲ್ಲಿ ನಿಸರ್ಗ ಪೂರಕ ವಿಧಾನಗಳನ್ನು ಅಳವಡಿಸಿಕೊಂಡು ಉತ್ತಮ ಆದಾಯ ಗಳಿಸುತ್ತಿದೆ.
ಕುಟುಂಬದ ಎಂಟೂ ಸದಸ್ಯರು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಹತ್ತು ಎಕರೆ ಜಮೀನಿನ ಕೃಷಿ ಕೆಲಸವನ್ನು ತಾವೇ ನೋಡಿಕೊಳ್ಳುತ್ತಾರೆ. 4 ಎಕರೆ ಭತ್ತ ಬಿಟ್ಟರೆ ಉಳಿದ 6 ಎಕರೆ ತೋಟವಿದೆ. ಈ ಪೈಕಿ 4 ಎಕರೆಯಲ್ಲಿ ಅಡಿಕೆ, 110 ತೆಂಗಿನ ಗಿಡ, ಕಾಳು ಮೆಣಸು, ಹೂವು, ಪಪ್ಪಾಯ, ತರಕಾರಿ ಬೆಳೆಯುತ್ತಾರೆ.
ಭತ್ತಕ್ಕೆ ರಾಸಾಯನಿಕ ಗೊಬ್ಬರ, ಔಷಧ ಬಳಸುತ್ತಾರೆ. ತೋಟಕ್ಕೆ ಸಾವಯವ ಗೊಬ್ಬರ ಹಾಗೂ ಜೈವಿಕ ಔಷಧ ಬಳಸುತ್ತಾರೆ. ಕಳೆ, ಹುಲ್ಲನ್ನು ಯಂತ್ರದಿಂದ ತುಂಡು ಮಾಡಿ ಮತ್ತೆ ಮಣ್ಣಿಗೆ ಸೇರಿಸುತ್ತಾರೆ. ಹಳೆ
ಹಾಗೂ ಉದುರಿದ ಅಡಿಕೆ, ತೆಂಗಿನ ಗರಿಗಳನ್ನು ಸುಡುವ ಬದಲು ಮತ್ತೆ ಮಣ್ಣಿಗೆ ಸೇರಿಸಿ ಫಲವತ್ತತೆ ಹೆಚ್ಚಿಸಿದ್ದಾರೆ. ಭತ್ತ, ಅಡಿಕೆ, ತೆಂಗು, ಕಾಳುಮೆಣಸು ಇವರಿಗೆ ಉತ್ತಮ ಆದಾಯ ತರುತ್ತವೆ. ಉಳಿದಂತೆ ತರಕಾರಿ, ಹೂವಿನ ಬೆಳೆಯಿಂದಲೂ ಆದಾಯ ಇದೆ.
ಹೈನುಗಾರಿಕೆ: ನಾಲ್ಕು ಮಿಶ್ರತಳಿ ಹಸುಗಳಿಗಾಗಿ ಕಾಲು ಎಕರೆಯಲ್ಲಿ ಹುಲ್ಲು ಬೆಳೆಸಿದ್ದಾರೆ. ಸಾಕಷ್ಟು ನೀರಿನ ಲಭ್ಯತೆ ಇದ್ದರೂ ಹನಿ ನೀರಾವರಿ ಅಳವಡಿಸಿದ್ದು ಗಿಡಗಳಿಗೆ ಅಗತ್ಯವಿರುವಷ್ಟು ನೀರನ್ನು ಮಾತ್ರ ಹರಿಸುತ್ತಾರೆ.
ವೃದ್ಧ ತಾಯಿ ಜಾನಮ್ಮ ಹೊರತುಪಡಿಸಿ ಕುಟುಂಬದ ಎಲ್ಲ ಸದಸ್ಯರೂ ಈ ಹಸುಗಳ ಚಾಕರಿ ಮಾಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.