ADVERTISEMENT

ಪ್ರಾಚೀನ ವಾಸ್ತುಶಿಲ್ಪಕ್ಕೆ ಸಾಟಿಯೇ ಇಲ್ಲ: ಕೆ.ಎಸ್. ಬಸವಂತಪ್ಪ

ಅಮರಶಿಲ್ಪಿ ಜಕಣಾಚಾರಿ ಜಯಂತಿಯಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 8:01 IST
Last Updated 2 ಜನವರಿ 2026, 8:01 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಜಕಣಾಚಾರಿ ಜಯಂತಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಶಾಸಕ ಕೆ.ಎಸ್‌. ಬಸವಂತಪ್ಪ ಪುಷ್ಪಾರ್ಚನೆ ಮಾಡಿದರು
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಜಕಣಾಚಾರಿ ಜಯಂತಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಶಾಸಕ ಕೆ.ಎಸ್‌. ಬಸವಂತಪ್ಪ ಪುಷ್ಪಾರ್ಚನೆ ಮಾಡಿದರು   

ದಾವಣಗೆರೆ: ಆಧುನಿಕ ತಂತ್ರಜ್ಞಾನ, ಸಲಕರಣೆ ಇಲ್ಲದ ಪ್ರಾಚೀನ ಕಾಲದಲ್ಲಿ ಉಳಿ ಮತ್ತು ಸುತ್ತಿಗೆಯಿಂದ ಅದ್ಭುತ ಕೆತ್ತನೆ ಮಾಡಿ ವಿಶ್ವ ಪ್ರಸಿದ್ಧಿ ಪಡೆದವರು ಅಮರಶಿಲ್ಪಿ ಜಕಣಾಚಾರಿ. ಅವರ ವಾಸ್ತುಶಿಲ್ಪಕ್ಕೆ ಸಾಟಿಯೇ ಇಲ್ಲ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಬಣ್ಣಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಅಮರಶಿಲ್ಪ ಜಕಣಾಚಾರಿ ಜಯಂತಿಯಲ್ಲಿ ಅವರು ಮಾತನಾಡಿದರು.

‘ಪ್ರಾಚೀನ ಕಾಲದ ಪಾರಂಪರಿಕ ದೇವಾಲಯ, ವಾಸ್ತುಶಿಲ್ಪ ಕೇಂದ್ರ, ಶಿಲೆಗಳು ಇಂದಿಗೂ ಉಳಿದಿವೆ. ಇದಕ್ಕೆ ಜಕಣಾಚಾರಿ ಅವರಂತಹ ಹೆಸರಾಂತ ಶಿಲ್ಪಿಗಳೇ ಕಾರಣ. ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಸಲಕರಣೆಗಳಿದ್ದರೂ ಪ್ರಾಚೀನ ಕಾಲದ ವಾಸ್ತುಶಿಲ್ಪ, ಕೆತ್ತನೆ ಮೀರಿ ಜನಪ್ರಿಯತೆ ಗಳಿಸಲು ಸಾಧ್ಯವಾಗಿಲ್ಲ’ ಎಂದರು.

ADVERTISEMENT

‘ಜಕಣಾಚಾರಿ ನಿರ್ಮಿಸಿದ ಬೇಲೂರು, ಹಳೇಬೀಡು ದೇವಾಲಯ ವಿಶ್ವಪ್ರಸಿದ್ದಿ ಪಡೆದಿವೆ. ಕಲ್ಲು ಕೆತ್ತನೆಯಷ್ಟೇ ಅಲ್ಲದೇ, ತಾಮ್ರ, ಬೆಳ್ಳಿ, ಚಿನ್ನದ ಮೇಲೆಯೂ ಕೈಚಳಕ ತೋರಿಸಿದ್ದಾರೆ. ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ, ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ಅಗತ್ಯವಿದೆ’ ಎಂದರು.

‘ಮಕ್ಕಳಿಗೆ ಕಟ್ಟು ಕಥೆಗಳ ಬದಲಾಗಿ ಸಾಹಿತ್ಯ ಮತ್ತು ಕಲೆ, ವಾಸ್ತುಶಿಲ್ಪದ ಇತಿಹಾಸದ ಬಗ್ಗೆ ತಿಳಿಸಬೇಕಿದೆ. ಉತ್ತರದಿಂದ ದಕ್ಷಿಣ ಭಾರತದುದ್ದಕ್ಕೂ ಹರಡಿಕೊಂಡಿರುವ ಗಾಂಧಾರ, ಮಥುರಾ ಮತ್ತು ಹೊಯ್ಸಳ ಶೈಲಿಯ ಕಲೆ ಮತ್ತು ವಾಸ್ತುಶಿಲ್ಪ ಮನವರಿಕೆ ಮಾಡಿಕೊಡಬೇಕಿದೆ. ಪ್ರಪಂಚದಲ್ಲಿ ಎಲ್ಲಿಯೂ ಕಾಣಲು ಸಾಧ್ಯವಾಗದಂತಹ ಕಲೆ ಹೊಯ್ಸಳ ಶೈಲಿಯ ವಾಸ್ತುಶಿಲ್ಪದಲ್ಲಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.

‘ಹೊಯ್ಸಳ ಕಾಲದ ಬೇಲೂರು, ಹಳೇಬೀಡು ದೇಗುಲಗಳಲ್ಲಿ ಅದ್ಭುತ ಕೆತ್ತನೆ ಇದೆ. ಭಾರತೀಯ ಪರಂಪರೆ, ಇತಿಹಾಸ, ಸಂಸ್ಕೃತಿಯನ್ನು ಸಾರುತ್ತಿವೆ. ತುಮಕೂರು ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ದೇವಾಲಯಗಳನ್ನು ಜಕಣಾಚಾರಿ ನಿರ್ಮಾಣ ಮಾಡಿದ್ದಾರೆ. ಕಲ್ಲೇದೇವಪುರದಲ್ಲಿ ಹೊಯ್ಸಳ ವಾಸ್ತುಶಿಲ್ಪ ಶೈಲಿಯನ್ನು ಕಾಣಬಹುದಾಗಿದೆ. ಜಕಣಾಚಾರಿ ಅವರ ಜೀವನ, ಸಾಧನೆ, ಯಶೋಗಾಥೆಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ಅಗತ್ಯತೆ’ ಎಂದರು.

ವಿಶ್ವಕರ್ಮ ಸಮಾಜದ ವೀರೇಶ್ ಆಚಾರಿ ಉಪನ್ಯಾಸ ನೀಡಿದರು. ‘ಧೂಡಾ’ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ, ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ತಹಶೀಲ್ದಾರ್ ಅಶ್ವತ್ಥ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಂದ್ರಚಾರ್, ಗೌರವಾಧ್ಯಕ್ಷ ಪೂರ್ವಾಚಾರ್, ಕಾರ್ಯದರ್ಶಿ ಬಿ.ವಿ. ಶಿವಾನಂದ್, ಉಪಾಧ್ಯಕ್ಷ ಬಿ. ಸಿದ್ದಾಚಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.