
ಬಸವಾಪಟ್ಟಣ: ಗ್ರಾಮಗಳಲ್ಲಿ ದನಕರುಗಳ ಸಾಕಾಣಿಕೆ ಕಡಿಮೆಯಾದ ಕಾರಣ ಅಡಿಕೆ ಬೆಳೆಗೆ ಅಗತ್ಯವಾದ ದನಗಳ ಗೊಬ್ಬರದ ಕೊರತೆ ನೀಗಿಸಿಕೊಳ್ಳಲು ಈ ಭಾಗದ ರೈತರು ಆಂಧ್ರಪ್ರದೇಶದ ಕುರಿಗೊಬ್ಬರದ ಮೊರೆ ಹೋಗಿದ್ಧಾರೆ.
ಕುರಿಗೊಬ್ಬರದಲ್ಲಿ ಸಾಕಷ್ಟು ಪ್ರಮಾಣದ ಸಾರಜನಕ, ಪೊಟ್ಯಾಷ್ ಮತ್ತು ನೈಟ್ರೋಜನ್ ಇದ್ದು, ಇದರಲ್ಲಿ ಶೇ 30 ರಿಂದ ಶೇ 40 ರಷ್ಟು ಸಾವಯವ ಅಂಶ ಇರುತ್ತದೆ. ಅಲ್ಲದೇ ಸೂಕ್ಷ್ಮ ಪೋಷಕಾಂಶಗಳಾದ ಮೆಗ್ನೀಷಿಯಂ, ಗಂಧಕ, ಕಬ್ಬಿಣ , ಜಿಂಕ್, ತಾಮ್ರ ಮುಂತಾದ ಅಂಶಗಳಿದ್ದು, ಅಡಿಕೆ ಬೆಳೆಗೆ ಸೂಕ್ತವಾಗಿದೆ. ಬೇಸಿಗೆಯಲ್ಲಿ ಈ ಗೊಬ್ಬರವನ್ನು ಅಡಿಕೆ ಗಿಡಗಳಿಗೆ ಹಾಕಿದರೆ ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ ರಂದು ತಾಲ್ಲೂಕು ಸಹಾಯಕ ತೋಟಗಾರಿಕಾ ಅಧಿಕಾರಿ ಸೌರಭ್ ಏಮಾಜೆ ತಿಳಿಸಿದರು.
ಮೊದಲು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು, ಬೆಳಗಾವಿ ಜಿಲ್ಲೆಯ ಹಲವು ಕಡೆಗಳಿಂದ ಕುರಿಗೊಬ್ಬರವನ್ನು ತರಿಸುತ್ತಿದ್ದೆವು. ಆದರೆ, ಬೇಡಿಕೆ ಹೆಚ್ಚಾಗಿ ಅಲ್ಲಿ ಗೊಬ್ಬರದ ಕೊರತೆ ಉಂಟಾದ್ದರಿಂದ ಈಗ ಆಂಧ್ರ ಪ್ರದೇಶದ ರಾಯದುರ್ಗ ಮತ್ತು ಕಲ್ಯಾಣದುರ್ಗದ ಕಡೆಯಿಂದ ತರಿಸುತ್ತಿದ್ದೇವೆ. ಈ ಗೊಬ್ಬರ ನಮ್ಮ ರಾಜ್ಯದ ಕುರಿಗೊಬ್ಬರಕ್ಕಿಂತಲೂ ಉತಮ ಗುಣಮಟ್ಟ ಹೊಂದಿದೆ.
40 ಕಿಲೋ ತೂಗುವ ಒಂದು ಚೀಲಕ್ಕೆ ₹ 210 ಇದ್ದು, ಪ್ರತಿ ಗಿಡದ ಕಳೆ ತೆಗೆದು ಎನ್ಪಿಕೆ ರಾಸಾಯನಿಕ ಗೊಬ್ಬರವನ್ನು ಅಲ್ಪ ಪ್ರಮಾಣದಲ್ಲಿ ಹಾಕಬೇಕು. ನಂತರ ಒಂದು ಅಡಿ ಅಂತರದಲ್ಲಿ ತಲಾ 10 ಕಿಲೋ ಕುರಿಗೊಬ್ಬರವನ್ನು ಅಡಿಕೆ ಗಿಡದ ಸುತ್ತಲೂ ಹಾಕಬೇಕು ಇದರಿಂದ ಗಿಡಗಳು ವಿಫುಲವಾಗಿ ಬೆಳೆಯುತ್ತವೆ ಎಂದು ರೈತ ಎಂ.ಎಸ್. ಜಯಣ್ಣ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.