ADVERTISEMENT

ದಾವಣಗೆರೆ ಎಎಸ್‌ಐ ಪುತ್ರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 11:32 IST
Last Updated 23 ಅಕ್ಟೋಬರ್ 2018, 11:32 IST

ದಾವಣಗೆರೆ: ನಗರದ ಮಹಿಳಾ ಪೊಲೀಸ್‌ ಠಾಣೆಯ ಎಎಸ್‌ಐ ಶೋಭಾ ಅವರ ಪುತ್ರ ವರುಣ್‌ (18) ಕೆಟಿಜೆ ನಗರದ 16ನೇ ಕ್ರಾಸ್‌ನಲ್ಲಿರುವ ತಮ್ಮ ಮನೆಯಲ್ಲಿ ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಗರದ ವಿಜ್ಞಾನ ಕಾಲೇಜೊಂದರಲ್ಲಿ ದ್ವಿತೀಯ ಪಿಯು ಓದುತ್ತಿದ್ದ ವರುಣ್‌ಗೆ ಪ್ರಥಮ ವರ್ಷದಲ್ಲಿ ಕಡಿಮೆ ಅಂಕ ಬಂದಿತ್ತು. ಇದರಿಂದ ಆತ ತೀವ್ರ ಖಿನ್ನತೆಗೆ ಒಳಗಾಗಿದ್ದ. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ತೆಗೆದರಾಯಿತು ಎಂದು ಪೋಷಕರು ಸಮಾಧಾನಪಡಿಸಿದ್ದರು. ಸೋಮವಾರ ಮನೆಯಲ್ಲಿ ಯಾರೂ ಇಲ್ಲದೇ ಇರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಲಾರಿ ಡಿಕ್ಕಿ: ಗರ್ಭಿಣಿ ಸಾವು

ADVERTISEMENT

ಉತ್ತರ ಸಂಚಾರ ಠಾಣಾ ವ್ಯಾಪ್ತಿಯ ನಗರದ ಮಾಗಾನಹಳ್ಳಿ ರಸ್ತೆಯಲ್ಲಿ ಸೋಮವಾರ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಗರ್ಭಿಣಿಯೊಬ್ಬರು ಮೃತಪಟ್ಟಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನ ಅರಸಿಕೆರೆಯ ಅಶ್ವಿನಿ (28) ಮೃತರು. ದಾವಣಗೆರೆಯ ವೈದ್ಯರಿಗೆ ತೋರಿಸಲು ಪತಿ ಕಿರಣಕುಮಾರ್‌ ಜೊತೆಗೆ ಬೈಕ್‌ನಲ್ಲಿ ಅಶ್ವಿನಿ ಬರುತ್ತಿದ್ದರು. ಹಿಂದಿನಿಂದ ಬಂದ ಹರಿಯಾಣ ಮೂಲದ ಲಾರಿ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಅಶ್ವಿನಿ ಅವರ ಕಾಲಿನ ಮೇಲೆ ಲಾರಿ ಹಾಯ್ದು ಹೋಗಿದೆ. ತೀವ್ರ ರಕ್ತಸ್ರಾವದಿಂದಾಗಿ ಬಳಲಿದ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಕಿರಣಕುಮಾರ್‌ ಅವರೂ ಗಾಯಗೊಂಡಿದ್ದಾರೆ.ಚಾಲಕನು ಲಾರಿ ಬಿಟ್ಟು ಪರಾರಿಯಾಗಿದ್ದಾನೆ.

ವಾಹನ ಡಿಕ್ಕಿ: ಹಮಾಲಿ ಸಾವು

ದಕ್ಷಿಣ ಸಂಚಾರ ಠಾಣೆ ವ್ಯಾಪ್ತಿಯ ನಗರದ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ ವಿನಾಯಕ ರೈಸ್‌ ಮಿಲ್‌ ಎದುರು ಸೋಮವಾರ ಬೆಳಿಗ್ಗೆ ಯಾವುದೋ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಮಾಲಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಮನಗರ ಇಂಡಸ್ಟ್ರಿಯಲ್‌ ಪ್ರದೇಶದ ಹಮಾಲಿ ಸುರೇಶ (40) ಮೃತರು. ರಸ್ತೆ ದಾಟುತ್ತಿದ್ದಾಗ ಲಾರಿಯೊಂದು ಬಂದು ಅವರ ಮೇಲೆ ಹಾಯ್ದು ಹೋಗಿದೆ. ಅವರ ದೇಹವು ಛಿದ್ರಗೊಂಡಿತ್ತು. ಡಿಕ್ಕಿ ಹೊಡೆದ ವಾಹನವು ಪರಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.