ಚಿನ್ನಿಕಟ್ಟೆ (ನ್ಯಾಮತಿ): ನರೇಗಾ ಕೆಲಸ ನೀಡಲು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ಯುವಕರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಿಡಿಒ ಮತ್ತು ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ, ಪೀಠೋಪಕರಣಗಳನ್ನು ಹಾಳು ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದ ಸಿದ್ದೇಶ ನಾಯ್ಕ ಮತ್ತು ಲಕ್ಕಿನಕೊಪ್ಪ ಗ್ರಾಮದ ಗಿರೀಶ ನಾಯ್ಕ ಅವರನ್ನು ಬಂಧಿಸಲಾಗಿದೆ.
‘ಶುಕ್ರವಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಆರೋಪಿಗಳು ಕಚೇರಿಯ ಬಿಎಫ್ಟಿ ವೀಣಾ ಅವರೊಂದಿಗೆ ನರೇಗಾ ಕೆಲಸದ ಬಗ್ಗೆ ಮಾಹಿತಿ ಕೇಳಿದರು. ಅವರು ನಿಮ್ಮ ಅರ್ಜಿ ನಮೂನೆ-6ನ್ನು ಅರಣ್ಯ ಇಲಾಖೆಗೆ ಕಳುಹಿಸಲಾಗಿದೆ ಎಂದು ತಿಳಿಸಿದಾಗ ನಮಗೆ ಅರಣ್ಯ ಇಲಾಖೆ ಬೇಡ, ಕೆರೆ ಹೂಳು ಎತ್ತುವ ಕೆಲಸ ಕೊಡಿ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತ ಅವರನ್ನು ಎಳೆದಾಡಿದರು. ಅವರು ತಪ್ಪಿಸಿಕೊಂಡುಹೊರಬಂದರು. ಪಕ್ಕದಲ್ಲಿದ್ದ ಕಂಪ್ಯೂಟರ್ ಆಪರೇಟರ್ ರಜನಿ ಅವರಿಗೂ ಬೈಯುತ್ತ ಉಗುಳಿದರು. ಕಚೇರಿಯ ಕುರ್ಚಿಗಳನ್ನು ಮುರಿದು ಹಾಕಿದರು. ಸಾರ್ವಜನಿಕವಾಗಿನಿಂದಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಜೆ. ಆಶಾ, ಬಿಎಫ್ಟಿ ಕರ್ತವ್ಯ ನಿರ್ವಹಿಸುವ ವೀಣಾ, ಕಂಪ್ಯೂಟರ್ ಆಪರೇಟರ್ ರಜನಿ ಅವರು ನ್ಯಾಮತಿ ಪೊಲೀಸ್ ಠಾಣೆಗೆ ದೂರುನೀಡಿದ್ದಾರೆ.
ನ್ಯಾಮತಿ ಸಬ್ಇನ್ಸ್ಪೆಕ್ಟರ್ ಪಿ.ಎಸ್. ರಮೇಶ ಆರೋಪಿಗಳನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.