ದಾವಣಗೆರೆ: ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಕಂದಾಯ ನಿರೀಕ್ಷಕನನ್ನು ಬಲೆಗೆ ಕೆಡವಲು (ಟ್ರ್ಯಾಪ್) ಬಂದ ಎಸಿಬಿ ಪೊಲೀಸರ ಮೇಲೆಯೇ ಇಲ್ಲಿನ ಶಿವಕುಮಾರಸ್ವಾಮಿ ಬಡಾವಣೆಯ ಬಳಿ ಕಂದಾಯ ನಿರೀಕ್ಷಕ ಕಾರು ಹತ್ತಿಸಲು ಪ್ರಯತ್ನಿಸಿದ್ದಾನೆ.
ದಾವಣಗೆರೆ ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ ಸಿದ್ದೇಶ್ ಪೊಲೀಸರ ಮೇಲೆ ಕಾರು ಹತ್ತಿಸಲು ಪ್ರಯತ್ನಪಟ್ಟವರು. ಕೈದಾಳೆ ಗ್ರಾಮದಲ್ಲಿ ಎರಡು ಎಕರೆ 30 ಗುಂಟೆ ಜಮೀನನ್ನು ಖರೀದಿಸಿದ್ದ ಖಾಸಗಿ ವೈದ್ಯರೊಬ್ಬರು ತಮ್ಮ ಪತ್ನಿ ಹೆಸರಿಗೆ ಖಾತೆ ಬದಲಾವಣೆಗೆ ಸಿದ್ದೇಶ್ ಬಳಿ ಹೋಗಿದ್ದರು. ಈ ವೇಳೆ ಸಿದ್ದೇಶ್ ₹15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.
ಹಣ ಕೊಡಲು ವೈದ್ಯರು ಹೇಳಿ ಶಿವಕುಮಾರಸ್ವಾಮಿ ಬಡಾವಣೆಯ ಸೇಂಟ್ ಕಾನ್ವೆಂಟ್ ರಸ್ತೆಗೆ ಬರಲು ಹೇಳಿದ್ದರು. ಆಗ ಸಿದ್ದೇಶ್ ಕಾರಿನಲ್ಲಿ ಬಂದಿದ್ದಾರೆ. ಆ ವೇಳೆಗಾಗಲೇ ಎಸಿಬಿ ತಂಡದ ಸಿಬ್ಬಂದಿ ಬೇರೆ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದರು.
ಹಣ ಸ್ವೀಕರಿಸಲು ಬಂದ ಸಿದ್ದೇಶ್ ಕೆಳಗೆ ಇಳಿಯದೇ ಚಾಲನೆ ಸ್ಥಿತಿಯಲ್ಲೇ ಕಾರನ್ನು ಇಟ್ಟಿದ್ದರು. ಆ ವೇಳೆ ವೈದ್ಯರು ಪ್ಯಾಂಟ್ನಿಂದ ಪಿನಾಪ್ತಲಿನ್ ಪೌಡರ್ ಸವರಿದ್ದ ₹15 ಸಾವಿರವನ್ನು ಸಿದ್ದೇಶ್ಗೆ ಕೊಟ್ಟು ತಲೆ ಕೆರೆದುಕೊಳ್ಳುವ ಮೂಲಕ ಸಂಜ್ಞೆ ಮಾಡಿದರು. ಆಗ ಅಲ್ಲಿಯೇ ಇದ್ದ ಎಸಿಬಿ ಅಧಿಕಾರಿಗಳು ಕಾರನ್ನು ಸುತ್ತುವರಿದರು. ಈ ವೇಳೆ ಕಾರನ್ನು ವೇಗವಾಗಿ ಚಲಿಸಿ ಕಲ್ಲೇಶಪ್ಪ ಅವರ ಮೇಲೆ ಹತ್ತಿಸಲು ಪ್ರಯತ್ನಿಸಿದ್ದಾನೆ. ಆ ವೇಳೆ ಅವರು ತಪ್ಪಿಸಿಕೊಂಡಿದ್ದಾರೆ.
ಎಸಿಬಿ ತಂಡ ಆ ಕಾರನ್ನು ಕಾರನ್ನು ಬೆನ್ನಟ್ಟಿದೆ. ಮಾಗನೂರು ಪೆಟ್ರೋಲ್ ಬಂಕ್ ಬಳಿ ಸಿದ್ದೇಶ್ ಪರಾರಿಯಾಗಿದ್ದಾರೆ. ಆತನ ಸುಳಿವು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಎಸಿಬಿ ಎಸ್ಐ ರವೀಂದ್ರ ಎಂ.ಕುರುಬಗಟ್ಟಿ ಅವರುಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.