ಹೊನ್ನಾಳಿ: ಬೀರಲಿಂಗೇಶ್ವರ ಕಾರ್ತಿಕೋತ್ಸವ ಅಂಗವಾಗಿ ಇಲ್ಲಿನ ಶ್ರೀ ಬೀರಲಿಂಗೇಶ್ವರ ಟ್ರಸ್ಟ್ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯ ಶುಕ್ರವಾರ ತೆರೆ ಕಂಡಿತು. ಈ ಬಾರಿ ಇಬ್ಬರು ಬಾಲಕಿಯರು ಭಾಗವಹಿಸಿ ಕುಸ್ತಿ ಆಡಿದ್ದು ವಿಶೇಷವಾಗಿತ್ತು.
ದಾವಣಗೆರೆಯ 8 ನೇ ತರಗತಿ ವಿದ್ಯಾರ್ಥಿನಿ ರೇಖಾ ಮತ್ತು 9 ನೇ ತರಗತಿ ವಿದ್ಯಾರ್ಥಿನಿ ಸ್ವಾತಿ ಕುಸ್ತಿ ಅಖಾಡಕ್ಕೆ ಇಳಿದವರು. ತಮಗೆ ಎದುರಾಳಿ ಸಿಗದಿದ್ದಾಗ ನಿರಾಸೆಗೊಂಡ ಅವರಿಗೆ ಕುಸ್ತಿ ಸಮಿತಿಯವರು ಅದೇ ವಯಸ್ಸಿನ ಬಾಲಕರೊಂದಿಗೆ ಕುಸ್ತಿಯಲ್ಲಿ ಸೆಣಸಾಡಲು ಅವಕಾಶ ಮಾಡಿಕೊಟ್ಟರು.
ಸ್ವಾತಿ ಸೆಣಸಾಡಿ ಸೋಲು ಕಂಡರೆ, ರೇಖಾ ಹುಡುಗನನ್ನು ಚಿತ್ ಮಾಡುವ ಮೂಲಕ ವಿಜಯದ ಮಾಲೆ ಧರಿಸಿದಳು.
ಕುಸ್ತಿ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದು, ಕುಸ್ತಿ ತರಬೇತಿ ಪಡೆದು ಮುಂದುವರಿಸುವುದಾಗಿ ತಿಳಿಸಿದರು.
ಅಖಾಡಕ್ಕೆ ಇಳಿದ ಬಾಲಕಿಯರಿಗೆ ಸಾರ್ವಜನಿಕರಿಂದ ಅಷ್ಟೇ ಪ್ರೋತ್ಸಾಹ, ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತು. ಅಖಾಡಕ್ಕೆ ಇಳಿಯುತ್ತಿದ್ದಂತೆ ಸಾರ್ವಜನಿಕರು ಸಿಳ್ಳೆ, ಚಪ್ಪಾಳೆ ಹಾಕಿ ಸ್ಫೂರ್ತಿ ತುಂಬಿದರು.
ಕುಸ್ತಿ ಸಮಿತಿ ವತಿಯಿಂದ ಬಾಲಕಿಯರನ್ನು ಸನ್ಮಾನಿಸಲಾಯಿತು. ವಿವಿಧೆಡೆಯ ಪೈಲ್ವಾನರು ಪಂದ್ಯದಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.