ದಾವಣಗೆರೆ: ಕನ್ನಡದ ಅಭಿಮಾನ ಅರಿವಿನ ಮೂಲಕ ಹುಟ್ಟಬೇಕು. ಅದು ಕೇವಲ ವಸ್ತುವಾಗಬಾರದು. ಹಾಡುವುದರಿಂದಾಗಲಿ ಅಥವಾ ಕನ್ನಡದ ಬಾವುಟ ಹಾರಿಸುವುದ ರಿಂದಾಗಲಿ, ಕನ್ನಡ ವಿರೋಧಿಗಳಿಗೆ ಮಸಿ ಬಳಿಯುವುದರಿಂದಾಗಲಿ ನಾವು ಕನ್ನಡವನ್ನು ಕಾಪಾಡುತ್ತೇವೆ ಎನ್ನುವುದು ಸತ್ಯವಲ್ಲ ಎಂದು ಡಾ. ದಾದಾಪೀರ್ ನವಿಲೇಹಾಳ್ ತಿಳಿಸಿದರು.
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಅಂತರ್ಜಾಲದ ಮೂಲಕ ಕನ್ನಡ ನುಡಿಹಬ್ಬ ಕಾರ್ಯಕ್ರಮದ 25ನೇ ದಿನದ ಉಪನ್ಯಾಸದಲ್ಲಿ ‘ನನ್ನ ಅರಿವಿನ ಭಾಷೆಯಾಗಿ ಕನ್ನಡ’ ಎಂಬ ವಿಷಯದ ಕುರಿತಾಗಿ ಮಾತನಾಡಿದರು.
ಮುಂದುವರಿದು ಮಾತನಾಡುತ್ತಾ, ಕನ್ನಡದ ರಕ್ಷಣೆ ವಾಸ್ತವವಾಗಿ ಕನ್ನಡವನ್ನು ಸೃಜನಶೀಲವಾಗಿ ಬಳಸುವುದರ ಮೂಲಕ ಕನ್ನಡವನ್ನು ನಾವು ಕಟ್ಟಬೇಕು. ಸೃಜನಶೀಲತೆ ಅಂತಿಮವಾಗಿ ಒಂದು ತಾತ್ವಿಕ ಅರಿವನ್ನು ರೂಪಿಸಬೇಕು. ಈಗಾಗಲೇ ಇರುವ ಅರಿವನ್ನು ಹೆಚ್ಚು ಹರಡುವ ಮೂಲಕ ಅದು ಸಾಧ್ಯವಾಗಬೇಕು ಎಂದು ತಿಳಿಸಿದರು.
ನಮ್ಮ ಬಹುಮುಖ್ಯ ಸಂಪತ್ತು ಯಾವುದೆಂದರೆ ಅದು ವಿವೇಕ. ಅದು ನನ್ನೊಳಗಿನ ಅರಿವನ್ನು ಎಚ್ಚರಗೊಳಿಸುವಂತಹ ಭಾಷೆಯ ಮೂಲಕವೇ ಹುಟ್ಟಬಹುದಾದ ಅಸ್ಮಿತೆ ಅದು ಎಂದರು.
ಕನ್ನಡವನ್ನು ಉಳಿಸಬೇಕಾದಂತಹ ಮತ್ತು ಗಟ್ಟಿಗೊಳಿಸಬೇಕಾದಂತ ಹೊಣೆಯನ್ನು ಹೊತ್ತು ಕೊಳ್ಳುವವರು ಕೃಷಿಯ ಮೂಲದ ಜನಪದಕ್ಕೆ ಹೋಗಬೇಕು. ಇಲ್ಲದೇ ಹೋದರೆಕನ್ನಡವನ್ನು ಕಟ್ಟಿ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಿ. ಜಿ. ಜಗದೀಶ್ ಕೂಲಂಬಿ ಸ್ವಾಗತಿಸಿದರು. ದಾವಣಗೆರೆಯ ಬೆಳಕು ಜಾನಪದ ಕಲಾ ತಂಡದ ರುದ್ರಾಕ್ಷಿ ಬಾಯಿ ಸಿ ಕೆ ಪುಟ್ಟ ನಾಯಕ್ ನಾಡಗೀತೆ ಹಾಗೂ ಜನಪದ ಗೀತೆಗಳನ್ನು ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.