ADVERTISEMENT

ಗಾಂಧೀಜಿಯ ಷರತ್ತಿನಿಂದಾಗಿ ವಸತಿ ನಿಲಯ ಆರಂಭ

ಮಹಾತ್ಮ ಗಾಂಧಿ ವಿದ್ಯಾರ್ಥಿ ನಿಲಯದ ವಜ್ರಮಹೋತ್ಸವ ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 13:28 IST
Last Updated 2 ಅಕ್ಟೋಬರ್ 2019, 13:28 IST
ಪಿಎಚ್‌ಡಿ ಪಡೆದ ಪತ್ರಕರ್ತ ವರದರಾಜ್ ಅವರನ್ನು ಬುಧವಾರ ದಾವಣಗೆರೆ ಮಹಾತ್ಮ ಗಾಂಧಿ ಸ್ಮಾರಕ ವಸತಿ ನಿಲಯದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು
ಪಿಎಚ್‌ಡಿ ಪಡೆದ ಪತ್ರಕರ್ತ ವರದರಾಜ್ ಅವರನ್ನು ಬುಧವಾರ ದಾವಣಗೆರೆ ಮಹಾತ್ಮ ಗಾಂಧಿ ಸ್ಮಾರಕ ವಸತಿ ನಿಲಯದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು   

ದಾವಣಗೆರೆ: ದಾವಣಗೆರೆಗೆ ಬರಬೇಕಿದ್ದರೆ ‘ಹರಿಜನರ’ ವಸತಿ ನಿಲಯ ಆರಂಭಿಸಬೇಕು ಎಂದು ಮಹಾತ್ಮ ಗಾಂಧೀಜಿ ಷರತ್ತು ವಿಧಿಸಿದ್ದರು. ಹಾಗಾಗಿ ಆಗಿನ ಪುರಸಭೆ 2 ಎಕರೆ ಜಮೀನು ಒದಗಿಸಿ, ಗಾಂಧೀಜಿ ಕೈಯಲ್ಲೇ ಗುದ್ದಲಿ ಪೂಜೆ ಮಾಡಿಸಿದ್ದರು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘ, ಡಾ. ಬಿ.ಎಂ. ತಿಪ್ಪೇಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ, ಮಹಾತ್ಮ ಗಾಂಧಿ ಸ್ಮಾರಕ ವಸತಿ ನಿಲಯಗಳ ಆಶ್ರಯದಲ್ಲಿ ಬುಧವಾರ ನಡೆದ ಮಹಾತ್ಮ ಗಾಂಧಿ ವಿದ್ಯಾರ್ಥಿನಿಲಯದ ವಜ್ರಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷರ ವರ್ಣಭೇದ ನೀತಿಯನ್ನು ರೈಲಿನಲ್ಲಿ ಅನುಭವಿಸಿದ್ದೇ ಗಾಂಧೀಜಿಗೆ ಹೋರಾಟ ಮಾಡಲು ಸ್ಪೂರ್ತಿಯಾಯಿತು. ಅವರದ್ದು ಅಖಂಡ ಭಾರತದ ಕಲ್ಪನೆಯಾಗಿತ್ತು. ಆದರೆ, ಅಧಿಕಾರದ ಕಿತ್ತಾಟದಿಂದಾಗಿ ಭಾರತ– ಪಾಕಿಸ್ತಾನ ಎಂದು ಇಬ್ಭಾಗವಾಯಿತು. ಗೋಡ್ಸೆ ಗಾಂಧಿಯನ್ನು ಕೊಂದಿರುವುದು ಎಲ್ಲರಿಗೂ ಗೊತ್ತು. ಈಗ ಗೋಡ್ಸೆಗೆ ದೇವಸ್ಥಾನ ಕಟ್ಟುವವರು ಹುಟ್ಟಿಕೊಂಡಿರುವುದು ವಿಷಾದದ ಸಂಗತಿ ಎಂದರು.

ADVERTISEMENT

ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಸೈನಿಕರು ಸಾವನ್ನಪ್ಪಿದರೆ ಹುತಾತ್ಮರು ಎಂದು ಕರೆಯುತ್ತೇವೆ. ದೇಶದಲ್ಲಿ ಒಬ್ಬರನ್ನು ಮಾತ್ರ ಮಹಾತ್ಮ ಎಂದು ಕರೆಯಲಾಗುತ್ತದೆ. ಅವರೇ ಗಾಂಧೀಜಿ. ದೇಶಕ್ಕಾಗಿ ತನ್ನನ್ನು ಸಮರ್ಪಿಸಿದ್ದರಿಂದ ಆ ಹೆಸರು ಅವರಿಗೆ ಬಂದಿದೆ’ ಎಂದು ವಿವರಿಸಿದರು.

ಗಾಂಧಿ ಎನ್ನುವುದು ವ್ಯಕ್ತಿಯಲ್ಲ. ಅದೊಂದು ಸಿದ್ಧಾಂತ. ಜಗತ್ತಿನ 9ನೇ ಅದ್ಭುತವೇ ಅವರ ಬದುಕು. ನಡೆನುಡಿ ಒಂದಾಗಿ ದಾರ್ಶನಿಕರಾದರು. ಅವರು 1934ರಲ್ಲಿ ದಾವಣಗೆರೆಗೆ ಬರುವಾಗ ಚಿತ್ರದುರ್ಗ ಮುರುಘಾಮಠದ ಜಯದೇವ ಶರಣರನ್ನು ಹಾವೇರಿಯ ಹೊಂಡದ ಮಠದಲ್ಲಿ ಭೇಟಿಯಾಗಿದ್ದರು. ಬಸವಣ್ಣರ ಬಗ್ಗೆ ತಿಳಿದುಕೊಂಡು, ಅಸ್ಪೃಶ್ಯರ ಬಗ್ಗೆ ಇನ್ನಷ್ಟು ಕೆಲಸ ಮಾಡಲು ಪ್ರೋತ್ಸಾಹದ ಮಾತುಗಳನ್ನಾಡಿದ್ದರು’ ಎಂದು ನೆನ‍ಪಿಸಿಕೊಂಡರು.

ಮಾಜಿ ಶಾಸಕ ಎಚ್‌. ಎಸ್‌. ಶಿವಶಂಕರ್‌, ‘ಈ ಸಮಾಜ ಜಿಲ್ಲೆಯಲ್ಲಿ ಅಗಾಧ ಶಕ್ತಿಯನ್ನು ಹೊಂದಿದೆ. ಆದರೆ ಇದರ ಅರಿವು ಇರದ ಈ ಜನಾಂಗದ ನಾಯಕರು ಬೇರೆ ನಾಯಕರ ಹಿಂದೆ ಹೋಗುತ್ತಿದ್ದಾರೆ’ ಎಂದರು.

ಪಿಎಚ್‌ಡಿ ಪದವಿ ಪಡೆದ ಸಂಘದ ನಿರ್ದೇಶಕ ಡಾ.ಸಿ. ವರದರಾಜ್‌ ಅವರನ್ನು ಸನ್ಮಾನಿಸಲಾಯಿತು. ಪ್ಯಾರಾಮೆಡಿಕಲ್‌ ಕಾಲೇಜಿನ ಕೊಠಡಿಗಳನ್ನು ಉದ್ಘಾಟಿಸಲಾಯಿತು. ಸಂಘದ ಅಧ್ಯಕ್ಷ ಎಲ್‌.ಎಂ. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಪ್ರೊ. ಎನ್‌. ಲಿಂಗಣ್ಣ, ಬೈಇಟಿ ಕಾಲೇಜು ನಿರ್ದೇಶಕ ವೃಷಭೇಂದ್ರಪ್ಪ, ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ಬಿ.ಎಚ್‌. ವೀರಭದ್ರಪ್ಪ, ಉಪಾಧ್ಯಕ್ಷ ಬಿ.ಎಂ. ಈಶ್ವರಪ್ಪ, ಜಂಟಿ ಕಾರ್ಯದರ್ಶಿ ಡಿ. ಗಂಗಾಧರಪ್ಪ, ನಿರ್ದೇಶಕರಾದ ಎ.ಕೆ. ನಾಗಪ್ಪ, ಬಿ.ಎಸ್‌. ಪುರುಷೋತ್ತಮ, ಎಂ.ಜಿ. ರಂಘನಾಥ್, ಶಿವರಾಜ್‌ ಆದಾಪುರ್‌, ಎನ್‌. ಮಲ್ಲೇಶಪ್ಪ, ಬಿ.ಕೆ. ಹುಚ್ಚೆಂಗಪ್ಪ, ಕಾಲೇಜು, ಹೈಸ್ಕೂಲು ಮುಖ್ಯಸ್ಥರಾದ ಜಿ.ಬಿ. ಪರಮೇಶ್ವರಪ್ಪ, ಡಾ. ದೇವೇಂದ್ರಪ್ಪ, ನಿಲುಘರ್‌, ಟಿ. ತಿಪ್ಪೇರುದ್ರಯ್ಯ, ಎನ್‌.ಪಿ. ಬಸವರಾಜಪ್ಪ, ಬಿ.ಜಿ. ಶಾಂತಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.