ADVERTISEMENT

ಗೋಮಾಂಸ ರಫ್ತು ತಡೆಯಲು ಸಾಧ್ಯವಾಗಿಲ್ಲ ಏಕೆ?: ಬಿಜೆಪಿಗೆ ಸಂತೋಷ ಲಾಡ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 8:14 IST
Last Updated 13 ಜುಲೈ 2025, 8:14 IST
ಸಂತೋಷ ಲಾಡ್
ಸಂತೋಷ ಲಾಡ್   

ದಾವಣಗೆರೆ: ಗೋಮಾಂಸ ರಫ್ತುವಿನಲ್ಲಿ ಭಾರತವು ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಗೋಮಾಂಸ ಉತ್ಪಾದನೆಯಲ್ಲಿ ಉತ್ತರಪ್ರದೇಶ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ನಿತ್ಯ ಬೆಳಗಾದರೆ ಗೋಮಾಂಸ ನಿಷೇಧದ ಬಗ್ಗೆ ಮಾತನಾಡುವ ಬಿಜೆಪಿಗೆ ಇದನ್ನು ತಡೆಯಲು ಈವರೆಗೆ ಏಕೆ ಸಾಧ್ಯವಾಗಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.

‘ದೇಶದ 20 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಗೋಮಾತೆಯ ಜಪ ಮಾಡುವ ಮುಖ್ಯಮಂತ್ರಿಯನ್ನು ಹೊಂದಿದ ಉತ್ತರಪ್ರದೇಶದಲ್ಲಿ ಗೋಮಾಂಸಕ್ಕೆ ಕಡಿವಾಣ ಬಿದ್ದಲ್ಲ. ನಾಯಿಗೆ ಪೌಷ್ಟಿಕಾಂಶಯುಕ್ತ ಆಹಾರದ ಕುರಿತು ಟೀಕೆ ಮಾಡುವ ಬಿಜೆಪಿ ನಾಯಕರು ಈ ಬಗ್ಗೆ ಮಾತನಾಡಬೇಕು’ ಎಂದು ಭಾನುವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

‘ಖೇಲೊ ಇಂಡಿಯಾದ ಅಡಿಯಲ್ಲಿ ಗುಜರಾತಿಗೆ ₹ 600 ಕೋಟಿ ನೀಡಲಾಗಿದೆ. ಉತ್ತರಪ್ರದೇಶಕ್ಕೆ ₹ 400 ಕೋಟಿ ಹಂಚಿಕೆಯಾಗಿದೆ. ಈ ರಾಜ್ಯಗಳಲ್ಲಿ ಒಬ್ಬರೇ ಒಬ್ಬರು ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಪಾಲ್ಗೊಂಡ ನಿದರ್ಶನ ಇಲ್ಲ. ಆದರೆ, ತಮಿಳುನಾಡಿಗೆ ₹ 43 ಕೋಟಿ ಮಾತ್ರ ಕೊಡಲಾಗಿದೆ. ಅತಿ ಹೆಚ್ಚು ಕ್ರೀಡಾ ಪದಕ ಗೆದ್ದ ಪಂಜಾಬ್ ಮತ್ತು ಹರಿಯಾಣಕ್ಕೆ ಕಡಿಮೆ ಅನುದಾನ ನೀಡಲಾಗಿದೆ. ಈ ತಾರತಮ್ಯ ಸಹಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ADVERTISEMENT

‘ದೇಶದಲ್ಲಿ ₹ 45 ಲಕ್ಷ ಕೋಟಿ ತೆರಿಗೆ ಸಂಗ್ರಹದ ಬೇಡಿಕೆ ಇದೆ. ಇದರಲ್ಲಿ ಶೇ 20ರಷ್ಟು ಸಾಧನೆ ಮಾಡಲು ಕೂಡ ಕೇಂದ್ರಕ್ಕೆ ಸಾಧ್ಯವಾಗಿಲ್ಲ. ಆಡಳಿತ, ಪ್ರಗತಿ ಮತ್ತು ಅಭಿವೃದ್ಧಿ ಶೂನ್ಯವಾಗಿದೆ. ಬಂಡವಾಳಶಾಹಿಗಳ ₹ 16.5 ಲಕ್ಷ ಕೋಟಿ ಸಾಲವನ್ನು ರೈಟ್ ಆಫ್‌ ಹೆಸರಿನಲ್ಲಿ ಮನ್ನಾ ಮಾಡಲಾಗಿದೆ. ಸಣ್ಣ ವ್ಯಾಪಾರಿ ಹಾಗೂ ರೈತರ ಸಾಲ ಮನ್ನಾ ಮಾಡುತ್ತಿಲ್ಲ. ಬೆಣ್ಣೆ ದೋಸೆಯ ಹೋಟೆಲ್‌ಗಳಿಗೂ ಸರಕು‌ ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ನೋಟಿಸ್ ನೀಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಶಾಲಾ ಶುಲ್ಕ ವಿಪರೀತ ಹೆಚ್ಚಾಗಿದೆ. ‌ಜನ ಸಾಮಾನ್ಯರು ಶಿಕ್ಷಣ ಪಡೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದ ಶುಲ್ಕಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ. ಈ ಕಾರ್ಯಕ್ಕೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡಲಿದೆ. ಶಿಕ್ಷಣ ಮತ್ತು ಆರೋಗ್ಯ ರಾಷ್ಟ್ರೀಕರಣ ಆಗಬೇಕು ಎಂಬುದು ನನ್ನ ಅಭಿಪ್ರಾಯ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.