ದಾವಣಗೆರೆ:ಜಿದ್ದಾಜಿದ್ದಿನ ಕಣವಾಗಿದ್ದ ದಾವಣಗೆರೆ ಮಹಾನಗರ ಪಾಲಿಕೆ ಗದ್ದುಗೆ ಹಿಡಿಯುವಲ್ಲಿ ಭಾರತೀಯ ಜನತಾ ಪಕ್ಷ ಯಶ ಕಂಡಿದೆ.
ಒಟ್ಟು 62 ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರಾದರೂ ಬಳಿಕ ಕಾಂಗ್ರೆಸ್ ಪಕ್ಷದ ಸದಸ್ಯರು ಚುನಾವಣೆ ಬಹಿಷ್ಕರಿಸಿದ್ದರಿಂದ ಬಿಜೆಪಿಗೆ ಗೆಲುವು ಅನಾಯಾಸವಾಗಿ ಲಭಿಸಿತು.
ಸಾಮಾನ್ಯ ವರ್ಗಕ್ಕೆ ಮೀಸಲಾದ ಮೇಯರ್ ಸ್ಥಾನಕ್ಕೆ ಬಿ.ಜಿ. ಅಜಯ್ ಕುಮಾರ್ ಹಾಗೂ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲು ಆಗಿದ್ದ ಉಪಮೇಯರ್ ಸ್ಥಾನಕ್ಕೆ ಸೌಮ್ಯ ನರೇಂದ್ರ ಕುಮಾರ್ ಆಯ್ಕೆಯಾದರು.
ಮತ ಚಲಾವಣೆ ಮಾಡಲು ಅರ್ಹರಿದ್ದ 62 ಮಂದಿಯಲ್ಲಿ ಮೂರು ಮಂದಿ ಕಾಂಗ್ರೆಸ್ನ ಸದಸ್ಯರು ಹಾಜರಾಗಿರಲಿಲ್ಲ. ನಂತರ 28 ಮಂದಿ ಬಹಿಷ್ಕಾರ ಮಾಡಿದರು.
‘ವಿಧಾನ ಪರಿಷತ್ ಸದಸ್ಯರ ಹೆಸರುಗಳನ್ನು ಸೇರಿಸುವ ಮೂಲಕಬಿಜೆಪಿಯ ಏಜೆಂಟರಂತೆ ಜಿಲ್ಲಾಧಿಕಾರಿ ಮತ್ತು ಪ್ರಾದೇಶಿಕ ಆಯುಕ್ತರು ಕೆಲಸ ಮಾಡಿದ್ದಾರೆ’ ಎಂದು ಪಾಲಿಕೆ ಸದಸ್ಯ ಎ. ನಾಗರಾಜ್ ಆರೋಪಿಸಿದರು.
‘ನಾವೂ ಮೂವರು ವಿಧಾನ ಪರಿಷತ್ ಸದಸ್ಯರಹೆಸರು ನೀಡಿದ್ದೆವು. ಅಧಿಕಾರಿಗಳು ಸೇರಿಸಲಿಲ್ಲ. ಆದರೆ ಬಿಜೆಪಿಯವರ ಹೆಸರುಗಳನ್ನು ಆನಂತರವೂ ಸೇರಿಸಿದ್ದಾರೆ’ ಎಂದು ಶಾಮನೂರು ಶಿವಶಂಕರಪ್ಪ ಆರೋಪಿಸಿದರು.
ಅಭಿನಂದನೆಗೆ ಕರಿಬೇಡಿ, ಕೆಲಸಕ್ಕೆ ಕರೆಯಿರಿ: ಮೇಯರ್
ಸ್ವಚ್ಛ ಭಾರತ್ ನಗರಗಳ ಪಟ್ಟಿಯಲ್ಲಿದಾವಣಗೆರೆ 200ನೇ ಸ್ಥಾನದಲ್ಲಿದೆ. ಅದನ್ನು ಎರಡಂಕೆಯೊಳಗೆ ತರವುದೂ ಸೇರಿ ಹಲವು ಕನಸುಗಳಿವೆ. ಹಾಗಾಗಿ ಯಾರೂ ನನ್ನನ್ನು ಅಭಿನಂದಿಸಲು ಕರೆಯಬೇಡಿ. ಕೆಲಸ ಇದ್ದರೆ ಕರೆಯಿರಿ ಎಂದು ನೂತನ ಮೇಯರ್ ಬಿ.ಜಿ. ಅಜಯ ಕುಮಾರ್ ಹೇಳಿದರು. ಮೇಯರ್ ಆಗಿ ಆಯ್ಕೆಯಾದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ನಾವ್ಯಾರಿಗೂ ದುಡ್ಡು ಕೊಟ್ಟಿಲ್ಲ. ಅಪಹರಣ ಮಾಡಿಲ್ಲ. ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ ಎಂದು ಸಮರ್ಥಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.