ಸಂತೇಬೆನ್ನೂರು: ಅಲಸಂದೆ ಬೆಳೆಯನ್ನು ಹೋಬಳಿ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಬಿತ್ತನೆ ಮಾಡಿದ್ದು, ಎರಡು ದಿನದಿಂದ ಬೀಳುತ್ತಿರುವ ಹಗುರ ಮಳೆಯಿಂದಾಗಿ ಬೆಳೆ ಚೇತರಿಕೆ ಕಂಡಿದೆ.
ಈಗಾಗಲೇ ಒಂದು ತಿಂಗಳಿನಿಂದ ಬಿತ್ತನೆ ಸಾಗಿದ್ದು, ಹಚ್ಚ ಹಸಿರಿನ ಎಲೆಗಳಿಂದ ಹೊಲಗಳಲ್ಲಿ ಅಲಸಂದೆ ಗರಿಗೆದರಿದೆ. ಅಲಸಂದೆ 90 ರಿಂದ 100 ದಿನದಲ್ಲಿ ಕೊಯ್ಲಿಗೆ ಬರುವ ದ್ವಿದಳ ಧಾನ್ಯ ಬೆಳೆ. ಉತ್ತಮ ಮಳೆಯಿಂದ ರೈತರು ಹಿಂಗಾರು ಬೆಳೆಯಾಗಿ ಅಲಸಂದೆ ಮೊರೆ ಹೋಗಿದ್ದಾರೆ. ಈಗಾಗಲೇ ಹೋಬಳಿ ವ್ಯಾಪ್ತಿಯಲ್ಲಿ 1 ಸಾವಿರ ಹೆಕ್ಟೇರ್ ಬಿತ್ತನೆ ಆಗಿದೆ. ಸಂತೇಬೆನ್ನೂರು ಹಾಗೂ ದೇವರಹಳ್ಳಿ ರೈತ ಸಂಪರ್ಕ ಕೆಂದ್ರಗಳಲ್ಲಿಯೇ 15 ರಿಂದ 17 ಟನ್ ಬಿತ್ತನೆ ಬೀಜ ಮಾರಾಟವಾಗಿವೆ. ಸ್ಥಳೀಯ ವ್ಯಾಪಾರಿಗಳ ಬಳಿಯು ಅಲಸಂದೆ ಬೀಜ ಖರೀದಿ ಭರದಿಂದ ಸಾಗಿದೆ.
ಮಳೆ ಕೊರತೆ ಉಂಟಾದರೆ ಕಪ್ಪು ಜಿಗಿ ರೋಗ ಬರುವ ಸಾಧ್ಯತೆ ಇದ್ದು, ಸದ್ಯ ಮಳೆಯಾಗಿರುವುದರಿಂದ ರೋಗ ಬಾಧೆ ತೀರ ಕಡಿಮೆ. ಇನ್ನೊಂದು ತಿಂಗಳು ಒಂದೆರಡು ಉತ್ತಮ ಮಳೆ ಬಿದ್ದರೆ ಅಲಸಂದೆ ಬೆಳೆ ಕಣ ಸೇರಲಿದೆ. ಕಳೆದ ಬಾರಿ ಪ್ರತಿ ಕ್ವಿಂಟಲ್ಗೆ ದರ ₹ 7500 ವರೆಗೆ ತಲುಪಿತ್ತು. ಪ್ರತಿ ಎಕರೆಗೆ 8 ರಿಂದ 9 ಕ್ವಿಂಟಾಲ್ ಇಳುವರಿ ಸಾಧ್ಯತೆ ಇದೆ ಎನ್ನುತ್ತಾರೆ ಕೃಷಿ ಅಧಿಕಾರಿ ಕೆ.ಎಸ್. ಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.