ಕಡರನಾಯ್ಕನಹಳ್ಳಿ: ನಿಗದಿತ ಸಮಯಕ್ಕೆ ಬಸ್ ಬರುತ್ತಿಲ್ಲ ಎಂದು ಆರೋಪಿಸಿ, ಗ್ರಾಮದ ವಿದ್ಯಾರ್ಥಿಗಳು ಗುರುವಾರ ಬೆಳಿಗ್ಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿದಿನ ಬೆಳಿಗ್ಗೆ 8.15ಕ್ಕೆ ಬರಬೇಕಿದ್ದ ಉಕ್ಕಡಗಾತ್ರಿ ಮಾರ್ಗದ ಬಸ್ 9 ಗಂಟೆಗೆ ಕಡರನಾಯ್ಕನಹಳ್ಳಿಗೆ ಬಂದು ತಲುಪಿತು. ಶಾಲೆ, ಕಾಲೇಜುಗಳಿಗೆ ತೆರಳಲು ಬಸ್ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಮುಕ್ಕಾಲು ಗಂಟೆ ತಡವಾಗಿ ಬಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಅಮಾವಾಸ್ಯೆ, ಹುಣ್ಣಿಮೆ ಹಾಗೂ ಕೆಲ ಸಂದರ್ಭಗಳಲ್ಲಿ ಬಸ್ಗಳನ್ನು ಇಲ್ಲಿ ನಿಲುಗಡೆ ಮಾಡುವುದಿಲ್ಲ. ಉಕ್ಕಡಗಾತ್ರಿ ಕಡೆಯಿಂದ ಬಸ್ಗಳು ಭರ್ತಿಯಾಗಿಯೇ ಬರುತ್ತವೆ. ಹೀಗಾಗಿ ಶಾಲಾ, ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಕ್ಕೆ ಸೂಕ್ತ ಸಮಯಕ್ಕೆ ಬಸ್ ಬರುವ ವ್ಯವಸ್ಥೆ ಆಗಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಗ್ರಾಮದ ಮುಖಂಡರಾದ ಗುಂಡೇರ ಈರಣ್ಣ, ಟಿ ಅಶೋಕ್, ಸೋಮಲಿಂಗ, ಭಾನುವಳ್ಳಿ ರಂಗಪ್ಪ ಅವರು ಮನವೊಲಿಸಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದರು.
ಉಕ್ಕಡಗಾತ್ರಿ ಮಾರ್ಗದ ಪತ್ತೇಪುರದ ರಸ್ತೆ ಕಿರಿದಾಗಿದ್ದು ಲಾರಿ ಸಿಕ್ಕಿಹಾಕಿಕೊಂಡಿದ್ದರಿಂದ ಬಸ್ ಬರುವುದು ವಿಳಂಬವಾಗಿದೆ. ವಿದ್ಯಾರ್ಥಿಗಳು ತೆರಳುವ ಸಮಯಕ್ಕೆ ಹೆಚ್ಚುವರಿ ಬಸ್ ಓಡಿಸಲಾಗುವುದು. ಬಸ್ ನಿಲುಗಡೆ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗುವುದುಮಹೇಶ್ ಡಿಪೊ ಮ್ಯಾನೇಜರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.