ADVERTISEMENT

ದಾವಣಗೆರೆ: ಟ್ಯಾಕ್ಸಿ ಚಾಲಕರ ಕಲ್ಯಾಣ ಮಂಡಳಿ ರಚನೆಗೆ ಆಗ್ರಹ

ಟ್ಯಾಕ್ಸಿ ಚಾಲಕರ ಕ್ಷೇಮಾಭಿವೃದ್ದಿ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 12:02 IST
Last Updated 7 ಆಗಸ್ಟ್ 2020, 12:02 IST
ಟ್ಯಾಕ್ಸಿ ಚಾಲಕರಿಗೆ ಕಲ್ಯಾಣ ಮಂಡಳಿ ರಚಿಸುವಂತೆ ಒತ್ತಾಯಿಸಿ ದಾವಣಗರೆ ಜಿಲ್ಲಾ ಟ್ಯಾಕ್ಸಿ ಚಾಲಕರ ಕ್ಷೇಮಾಭಿವೃದ್ದಿ ಸಂಘದಿಂದ ಹದಡಿ ರಸ್ತೆಯಲ್ಲಿರುವ ಯುಬಿಡಿಟಿ ಕಾಲೇಜು ಸಮೀಪದ ಟ್ಯಾಕ್ಸಿ ನಿಲ್ದಾಣದ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಟ್ಯಾಕ್ಸಿ ಚಾಲಕರಿಗೆ ಕಲ್ಯಾಣ ಮಂಡಳಿ ರಚಿಸುವಂತೆ ಒತ್ತಾಯಿಸಿ ದಾವಣಗರೆ ಜಿಲ್ಲಾ ಟ್ಯಾಕ್ಸಿ ಚಾಲಕರ ಕ್ಷೇಮಾಭಿವೃದ್ದಿ ಸಂಘದಿಂದ ಹದಡಿ ರಸ್ತೆಯಲ್ಲಿರುವ ಯುಬಿಡಿಟಿ ಕಾಲೇಜು ಸಮೀಪದ ಟ್ಯಾಕ್ಸಿ ನಿಲ್ದಾಣದ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.   

ದಾವಣಗೆರೆ: ಟ್ಯಾಕ್ಸಿ ಚಾಲಕರಿಗೆ ಕಲ್ಯಾಣ ಮಂಡಳಿ ರಚಿಸುವಂತೆ ಒತ್ತಾಯಿಸಿ ದಾವಣಗರೆ ಜಿಲ್ಲಾ ಟ್ಯಾಕ್ಸಿ ಚಾಲಕರ ಕ್ಷೇಮಾಭಿವೃದ್ದಿ ಸಂಘದಿಂದ ಹದಡಿ ರಸ್ತೆಯಲ್ಲಿರುವ ಯುಬಿಡಿಟಿ ಕಾಲೇಜು ಸಮೀಪದ ಟ್ಯಾಕ್ಸಿ ನಿಲ್ದಾಣದ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ‘ಕೋವಿಡ್–19ನಿಂದ ಸಾರ್ವಜನಿಕರು ಟ್ಯಾಕ್ಸಿಗಳನ್ನು ಬಳಸದೇ ಇರುವುದರಿಂದ ಜೀವನ ಸಂಕಷ್ಟದಲ್ಲಿದೆ. ಕ್ಯಾಬ್ ಮತ್ತು ಇತರೆ ವಾಹನಗಳ ಮೇಲಿನ ತೆರಿಗೆಯನ್ನು ಮನ್ನಾ ಮಾಡಬೇಕು. ಅಲ್ಲದೇ ಒಂದು ವರ್ಷಗಳ ಕಾಲ ಬ್ಯಾಂಕ್‌ನಲ್ಲಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು’ ಎಂದರು.

‘ದಾವಣಗೆರೆಯನ್ನು ಸ್ಮಾರ್ಟ್‌ಸಿಟಿ ಎಂದು ಘೋಷಣೆ ಮಾಡಿರುವುದರಿಂದ, ಜನಸಂಖ್ಯೆ ಆಧಾರದ ಮೇಲೆ ಏರಿಕೆಯಾಗುತ್ತಿರುವ ವಾಹನಗಳಿಗೆ ಅನುಗುಣವಾಗಿ ಹದಡಿ ರಸ್ತೆಯಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ಸಮೀಪದ ದೇವಸ್ಥಾನದ ಬಲಭಾಗದಲ್ಲಿ ಖಾಲಿ ಇರುವ ಜಾಗದಲ್ಲಿ ಕಾಯಂ ಆಗಿ ಟ್ಯಾಕ್ಸಿ ಚಾಲಕರ ನಿಲ್ದಾಣ ನಿರ್ಮಿಸಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟ್ಯಾಕ್ಸಿ ಚಾಲಕರ ಕುಂದು ಕೊರತೆಗಳ ನಿವಾರಣೆಗೆ ಸಂಬಂಧಿಸಿದಂತೆ ಸಾರಿಗೆ, ಪಾಲಿಕೆ ಆಯಕ್ತರನ್ನು ಒಳಗೊಂಡಂತೆ ಸಭೆ ಕರೆಯಬೇಕು’ ಎಂದು ಮನವಿ ಮಾಡಿದರು.

ADVERTISEMENT

ಸಂಘದ ಗೌರವಾಧ್ಯಕ್ಷ ಆವರಗೆರೆ ಎಚ್.ಜಿ. ಉಮೇಶ್ ಮಾತನಾಡಿ, ‘ರಾಜ್ಯದಾದ್ಯಂತ ಸುಮಾರು 6 ಲಕ್ಷದಿಂದ 8ಲಕ್ಷದಷ್ಟು ಕ್ಯಾಬ್, ಟ್ಯಾಕ್ಸಿ, ಆಟೊ, ಬಸ್, ಲಾರಿ ಡ್ರೈವರ್‌ಗಳು ಸುರಕ್ಷಿತವಾದ ನೆಲೆ ಇಲ್ಲದೇ ಅತಂತ್ರದಿಂದ ಜೀವಿಸುತ್ತಿದ್ದಾರೆ. ಕಾರಣ ಇವರ ಜೀವನಕ್ಕಾಗಿ ಕಲ್ಯಾಣ ಮಂಡಳಿ ರಚಿಸುವ ಮೂಲಕ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಚ್. ಪರಮೇಶ್, ಉಪಾಧ್ಯಕ್ಷ ಬಿ.ಎಚ್. ರಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಜಿ. ಸುಭಾಶ್, ಪದಾಧಿಕಾರಿಗಳಾದ ಟಿ. ಮಂಜುನಾಥ್, ಟಿ. ಪ್ರಭು, ವಿ.ವೈ. ಸಂದೀಪ್, ಕೆ.ಎಂ. ರಮೇಶ್, ಎಂ. ಭೀಮಪ್ಪ, ಬಿ.ವಿ. ಸುಧೀಂದ್ರಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.