ADVERTISEMENT

ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಅಭಿಯಾನ

ಪಿ.ಎಂ.ಕಿಸಾನ್ ಫಲಾನುಭವಿಗಳಿಗೆ 24ರೊಳಗೆ ಕೆಸಿಸಿ ಸೌಲಭ್ಯ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 15:09 IST
Last Updated 7 ಫೆಬ್ರುವರಿ 2020, 15:09 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಕಿಸಾನ್ ಕಾರ್ಡ್‌ ಕುರಿತ ಮಾಹಿತಿ ನೀಡಿದರು. ಲೀಡ್‌ ಬ್ಯಾಂಕ್‌ ಮ್ಯಾನೇಜರ್ ಸುಶೃತ್ ಡಿ.ಶಾಸ್ತ್ರಿ, ನಬಾರ್ಡ್ ಬ್ಯಾಂಕ್‌ ಡಿಡಿಎಂ ಬಿ. ರವೀಂದ್ರ ಇದ್ದಾರೆ. –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಕಿಸಾನ್ ಕಾರ್ಡ್‌ ಕುರಿತ ಮಾಹಿತಿ ನೀಡಿದರು. ಲೀಡ್‌ ಬ್ಯಾಂಕ್‌ ಮ್ಯಾನೇಜರ್ ಸುಶೃತ್ ಡಿ.ಶಾಸ್ತ್ರಿ, ನಬಾರ್ಡ್ ಬ್ಯಾಂಕ್‌ ಡಿಡಿಎಂ ಬಿ. ರವೀಂದ್ರ ಇದ್ದಾರೆ. –ಪ್ರಜಾವಾಣಿ ಚಿತ್ರ   

ದಾವಣಗೆರೆ: ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಸೌಲಭ್ಯವನ್ನು ಫೆ.24ರೊಳಗೆ ತಲುಪಿಸುವ ಸಲುವಾಗಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

‘ದೇಶದ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ನ (ಬೆಳೆಸಾಲ) ಸೌಲಭ್ಯ ತಲುಪಿಸುವ ಉದ್ದೇಶದಿಂದ 2019ರ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಅಭಿಯಾನವನ್ನು ಜಾರಿಗೆ ತಂದಿದೆ. ಆದರೆ ಫಲಾನುಭವಿಗಳೆಲ್ಲರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್‌ ದೊರೆತಿಲ್ಲದಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು, ಎಲ್ಲಾ ರೈತರಿಗೂ ಇದನ್ನು ತಲುಪಿಸುವ ಉದ್ದೇಶದಿಂದ ಈ ಅಭಿಯಾನ ಕೈಗೊಳ್ಳಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಫೆ.24 ರಂದು ಪಿ.ಎಂ.ಕಿಸಾನ್ ಯೋಜನೆಯ ವರ್ಷಾಚರಣೆ ಇದ್ದು, ಆ ದಿನಾಂಕದೊಳಗೆ ಯೋಜನೆಯ ಫಲಾನುಭವಿಗಳಿಗೆ ಕಾರ್ಡ್ ಒದಗಿಸುವುದು ಸರ್ಕಾರದ ಉದ್ದೇಶ. ದೇಶದಲ್ಲಿ ಈ ಯೋಜನೆಯಡಿ ಒಂದು ಕೋಟಿಗೂ ಹೆಚ್ಚು ರೈತರಿಗೆ ಹೊಸದಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ತಲುಪಿಸುವ ಗುರಿ ಹೊಂದಲಾಗಿದೆ. ಆದ್ದರಿಂದ ಎಲ್ಲ ಬ್ಯಾಂಕುಗಳಲ್ಲೂ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆದುಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ ಪಿ.ಎಂ.ಕಿಸಾನ್ ಯೋಜನೆಯಡಿ ಒಟ್ಟು 1,41,278 ಫಲಾನುಭವಿಗಳಿದ್ದು, ಅವರಲ್ಲಿ ಬಹುತೇಕ ಮಂದಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದಿಲ್ಲ. ಆದ್ದರಿಂದ ಅವರಿಗೆ ಸೌಲಭ್ಯವನ್ನು ಒದಗಿಸುವ ಅಭಿಯಾನ ಇದಾಗಿದೆ. ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ಜಮೀನಿನ ವಿವರ, ಪಹಣಿ ಹಾಗೂ ಕೆವೈಸಿ ದಾಖಲೆಗಳನ್ನು ಒದಗಿಸಿ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಈಗಾಗಲೇ ಎಲ್ಲಾ ಬ್ಯಾಂಕ್‍ಗಳಲ್ಲೂ ಈ ಸೌಲಭ್ಯ ಒದಗಿಸುವಂತೆ ನಿರ್ದೇಶನ ನೀಡಲಾಗಿದೆ. ಲೀಡ್ ಬ್ಯಾಂಕ್, ಗ್ರಾಮೀಣ ಬ್ಯಾಂಕ್ ಹಾಗೂ ನಬಾರ್ಡ್ ಬ್ಯಾಂಕ್‍ಗಳ ಮ್ಯಾನೇಜರ್‍ಗಳ ಮಾರ್ಗದರ್ಶನದಲ್ಲಿ ಈ ಕಾರ್ಯ ಯಶಸ್ವಿಯಾಗಿ ನಡೆಯಲಿದೆ’ ಎಂದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಸುಶೃತ ಡಿ.ಶಾಸ್ತ್ರಿ ಮಾತನಾಡಿ, ‘ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಣಿಯಾಗಿರುವವರಲ್ಲಿ ಬಹುತೇಕ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆದಿಲ್ಲ. ಆದ್ದರಿಂದ ನೊಂದಾಯಿತ ರೈತರೆಲ್ಲರೂ ಕ್ರೆಡಿಟ್ ಕಾರ್ಡ್ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

ನಬಾರ್ಡ್ ಬ್ಯಾಂಕಿನ ಎಡಿಎಂ ವಿ.ರವೀಂದ್ರ ಮಾತನಾಡಿ, ‘ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್, ಗ್ರಾಮೀಣ ಬ್ಯಾಂಕುಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಂದ 2019ರ ಡಿಸೆಂಬರ್ 31ರವರೆಗೆ ಬೆಳೆ ಸಾಲ ಚಾಲ್ತಿಯಲ್ಲಿರುವ 1,26,012 ರೈತರಿದ್ದು, ಇಲ್ಲಿಯವರೆಗೆ 1,41,278 ರೈತರು ಮಾತ್ರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಉಳಿದ ರೈತರು ಇದರ ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕರಾದ ಶಂಕರ್ ಕನವಳ್ಳಿ ಇದ್ದರು.

ಅಂಕಿ ಅಂಶ

1,41,278

ಪಿಎಂ ಕಿಸಾನ್ ಯೋಜನೆಯ ಜಿಲ್ಲೆಯ ಒಟ್ಟು ಫಲಾನುಭವಿಗಳು

1,47,447

ರೈತರಿಗೆ ಜಿಲ್ಲೆಯಲ್ಲಿ ಸೌಲಭ್ಯ

₹1664.64

ಕೋಟಿ ಸಾಲ ಸೌಲಭ್ಯ

1,42,278

ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಾಯಿತ ರೈತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.