ADVERTISEMENT

ಕ್ಯಾನ್ಸರ್‌ ಗುಣಪಡಿಸಬಹುದಾದ ಕಾಯಿಲೆ: ಡಾ. ಜಿ.ಡಿ. ರಾಘವನ್

ಅಸಾಂಕ್ರಾಮಿಕ ರೋಗಗಳಿಂದಲೇ ಶೇ 60ರಷ್ಟು ಸಾವು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 4:53 IST
Last Updated 4 ಫೆಬ್ರುವರಿ 2023, 4:53 IST
ಡಾ. ಜಿ.ಡಿ. ರಾಘವನ್
ಡಾ. ಜಿ.ಡಿ. ರಾಘವನ್   

ವಿಶ್ವದಾದ್ಯಂತ ಫೆಬ್ರುವರಿ 4ರಂದು ‘ಕ್ಯಾನ್ಸರ್ ಜಾಗೃತಿ ದಿನ’ ಆಚರಿಸಲಾಗುತ್ತಿದೆ. ಕ್ಯಾನ್ಸರ್ (ಅರ್ಬುದ ರೋಗ) ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವುದು, ತನ್ಮೂಲಕ ಕ್ಯಾನ್ಸರ್ ಬಗ್ಗೆ ಜನಸಾಮಾನ್ಯರಲ್ಲಿ ಇರಬಹುದಾದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ಪ್ರಾರಂಭಿಕ ಗುಣಲಕ್ಷಣಗಳ ಕುರಿತು ಆರೋಗ್ಯ ಶಿಕ್ಷಣ ನೀಡಿ ಸೂಕ್ತ ತಪಾಸಣೆ ಮಾಡಿ ಚಿಕಿತ್ಸೆಗೆ ಒಳಪಡಿಸಿ ಕ್ಯಾನ್ಸರ್ ಒಂದು ಗುಣಪಡಿಸಬಹುದಾದ ಕಾಯಿಲೆ ಎಂದು ತಿಳಿಸುವುದು ಈ ಜಾಗೃತಿಯ ಉದ್ದೇಶವಾಗಿದೆ.

ಕ್ಯಾನ್ಸರ್ ಒಂದು ಅಸಾಂಕ್ರಾಮಿಕ, ಅಂದರೆ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತಹ ಕಾಯಿಲೆ. ಆನುವಂಶೀಯತೆ, ಜೀವನ ಶೈಲಿಯಲ್ಲಿ ಬದಲಾವಣೆ, ತಂಬಾಕು ಸೇವನೆ, ಮದ್ಯಪಾನ ಮುಂತಾದ ಕಾರಣಗಳಿಂದ ಕ್ಯಾನ್ಸರ್ ಬರುತ್ತದೆ. ಬಾಯಿಯ ಕ್ಯಾನ್ಸರ್, ಸ್ತನದ ಕ್ಯಾನ್ಸರ್ ಮತ್ತು ಗರ್ಭಕೋಶದ ಕ್ಯಾನ್ಸರ್ ಇವು ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್‌ಗಳಾಗಿವೆ.

ಕ್ಯಾನ್ಸರ್‌ನಲ್ಲಿ ‘ಬಿನೈನ್’ (Benign) ಹಾಗೂ ‘ಮ್ಯಾಲಿಗ್ನೆಂಟ್’ (Malignant) ಎಂದು ಎರಡು ವಿಧಗಳಿವೆ. ‘ಬಿನೈನ್’ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ‘ಮ್ಯಾಲಿಗ್ನೆಂಟ್’ ಕ್ಯಾನ್ಸರ್ ಹೆಚ್ಚು
ಅಪಾಯಕಾರಿಯಾಗಿದೆ. ಅದನ್ನು ಪ್ರಾರಂಭಿಕ ಹಂತದಲ್ಲೇ, ಅಂದರೆ 1–2ನೇ ಹಂತದಲ್ಲೇ ಹಾಗೂ ಕೆಲವೊಮ್ಮೆ ಸೂಕ್ತ ಚಿಕಿತ್ಸೆ ಮೂಲಕ 3ನೇ ಹಂತದಲ್ಲಿ ಕೂಡ ಗುಣಪಡಿಸ ಬಹುದಾಗಿದೆ.

ADVERTISEMENT

ಕ್ಯಾನ್ಸರ್ ಮತ್ತು ಇತರ ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಪಾರ್ಶ್ವವಾಯು ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್‌ಪಿಸಿಡಿಸಿಎಸ್ (ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮ) ಮೂಲಕ ಆರೋಗ್ಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟವರನ್ನು ಸಮೀಕ್ಷೆಗೆ ಒಳಪಡಿಸಿ ರೋಗಲಕ್ಷಣ ಇರುವವರನ್ನು ತಪಾಸಣೆ ಮಾಡಿಸಿ, ಕಾಯಿಲೆ ದೃಢಪಟ್ಟರೆ ಕೂಡಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ದೃಢಪಟ್ಟ ರೋಗಿಗಳಿದ್ದರೆ ಅವರಿಗೆ ಸೂಕ್ತ ಉಪಶಾಮಕ ಚಿಕಿತ್ಸೆಯನ್ನು ವೈದ್ಯಾಧಿಕಾರಿಗಳು ಹಾಗೂ ಸಮುದಾಯ ಆರೋಗ್ಯ

ಅಧಿಕಾರಿಗಳು ನೀಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಅಸಾಂಕ್ರಾಮಿಕ ರೋಗಗಳಿಂದ ಶೇ 60ಕ್ಕೂ ಹೆಚ್ಚು ಸಾವು ಸಂಭವಿಸುತ್ತಿದೆ. ಇದರ ಕುರಿತು ಜಾಗೃತಿ ಹಾಗೂ ಅರಿವು ಮೂಡಿಸಿ ಮರಣ ಪ್ರಮಾಣದ ದರವನ್ನು ಗಣನೀಯವಾಗಿ ತಗ್ಗಿಸು ವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉದ್ದೇಶವಾಗಿದೆ.

(ಲೇಖಕರು: ಜಿಲ್ಲಾ ಸರ್ವೇಕ್ಷಣಾಧಿಕಾರಿ ಮತ್ತು ಅನುಷ್ಠಾನಾಧಿಕಾರಿ, ಅಸಾಂಕ್ರಾಮಿಕ ರೋಗಗಳ ವಿಭಾಗ, ದಾವಣಗೆರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.