ADVERTISEMENT

ಕಳ್ಳತನದ ಆರೋಪಿಯ ಸೆರೆ

​ಪ್ರಜಾವಾಣಿ ವಾರ್ತೆ
Published 9 ಮೇ 2019, 20:09 IST
Last Updated 9 ಮೇ 2019, 20:09 IST

ದಾವಣಗೆರೆ: ಮನೆ ಕಳ್ಳತನ, ಸರ, ಜಾನುವಾರು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಚನ್ನಗಿರಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಚನ್ನಗಿರಿ ರಾಜಪ್ಪ ಅಲಿಯಾಸ್‌ ನಾಗರಾಜಪ್ಪ (32) ಬಂಧಿತ ಆರೋಪಿ. ಚನ್ನಗಿರಿ ಅಜ್ಜಿಹಳ್ಳಿ ಸರ್ಕಲ್ ಹತ್ತಿರ ಗಸ್ತು ತಿರುಗುತ್ತಿದ್ದ ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸುವ ವೇಳೆ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ನಡೆಸಿದಾಗ ಹರೋನಹಳ್ಳಿ ಗ್ರಾಮದಲ್ಲಿ ಕೀಪ್ಯಾಡ್‌ ಮೊಬೈಲ್‌ ಹ್ಯಾಂಡ್‌ಸೆಟ್‌, ₹ 23 ಸಾವಿರ ನಗದು ಕಳವು ಮಾಡಿರುವುದಾಗಿ ತಿಳಿಸಿದ್ದಾನೆ. ಮತ್ತಷ್ಟು ವಿಚಾರಿಸಿದಾಗ ಮತ್ತೊಬ್ಬ ಆರೋಪಿಯೊಂದಿಗೆ ಸೇರಿ ವರ್ಷದ ಹಿಂದೆ ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿಯಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿರುವುದನ್ನು, ಜನವರಿಯಲ್ಲಿ ಚನ್ನಗಿರಿ ನಿತೀಗೆರೆ ಗ್ರಾಮದಲ್ಲಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದನ್ನು ಬಾಯಿಬಿಟ್ಟಿದ್ದಾನೆ. ಅಲ್ಲದೇ ಶಿವಕುಳೇನೂರು ಗ್ರಾಮದಲ್ಲಿ 3 ಹಸುಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ.

ಆರೋಪಿಯಿಂದ ₹ 1.41 ಲಕ್ಷ ಮೌಲ್ಯದ ಚಿನ್ನಾಭರಣ, ₹ 40 ಸಾವಿರ ಹಾಗೂ ಒಂದು ಬೈಕ್‌ ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆ ಗ್ರಾಮಾಂತರ ಡಿವೈಎಸ್‌ಪಿ ಚಿಕ್ಕಸ್ವಾಮಿ ಮಾರ್ಗದರ್ಶನದಲ್ಲಿ ಚನ್ನಗಿರಿ ಇನ್‌ಸ್ಪೆಕ್ಟರ್‌ ಆರ್‌.ಆರ್‌. ಪಾಟೀಲ್‌, ಪಿಎಸ್‌ಐಗಳಾದ ಶಿವರುದ್ರಪ್ಪ ಎಸ್‌. ಮೇಟಿ, ಶಿವಕುಮಾರ ನಾಯ್ಕ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.