ADVERTISEMENT

ಸಂತೇಬೆನ್ನೂರು | ಭದ್ರಾ ನಾಲೆಗೆ ಉರುಳಿದ ಕಾರು: ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 4:07 IST
Last Updated 9 ನವೆಂಬರ್ 2025, 4:07 IST
   

ಸಂತೇಬೆನ್ನೂರು (ದಾವಣಗೆರೆ): ಚನ್ನಗಿರಿ ತಾಲ್ಲೂಕಿನ ಹೊಸೂರು ಗ್ರಾಮದ ಭದ್ರಾ ನಾಲೆಗೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಭಾನುವಾರ ನಸುಕಿನಲ್ಲಿ ಉರುಳಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.

ದಾವಣಗೆರೆ ನಗರದ ನಿವಾಸಿಗಳಾದ ಮಲ್ಲಿಕಾರ್ಜುನ್‌ (29) ಹಾಗೂ ಸಿದ್ದೇಶ್ (38) ಮೃತರು. ಇತರ ನಾಲ್ವರು ಈಜಿ ನಾಲೆಯ ದಡ ಸೇರಿದ್ದಾರೆ.

ಆರು ಜನ ಸ್ನೇಹಿತರು ಮಂಗಳೂರು ಪ್ರವಾಸ ಮುಗಿಸಿಕೊಂಡು‌ ಭಾನುವಾರ ರಾತ್ರಿ ದಾವಣಗೆರೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಕಾರನ್ನು ಜನರು ನಾಲೆಯಿಂದ‌ ಮೇಲಕ್ಕೆ ಎತ್ತಿದ್ದಾರೆ. ಚಾಲಕನ ನಿದ್ದೆಯ ಮಂಪರಿನಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ADVERTISEMENT

ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಸಮೀಪದ ಭದ್ರಾ ನಾಲೆಗೆ ಹೊಂದಿಕೊಂಡ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ನಾಲೆಗೆ ಉರುಳಿದ ಕಾರಿನ ಬಾಗಿಲು ತೆರೆದು ನಾಲ್ವರು ಪ್ರಣಾಪಾಯದಿಂದ ಪಾರಾಗಿದ್ದಾರೆ. ಮಲ್ಲಿಕಾರ್ಜುನ್‌ ಮೃತದೇಹ ಹೊಸೂರು ಬಳಿ ಪತ್ತೆಯಾಗಿದೆ. ಸಿದ್ದೇಶ್ ಮೃತದೇಹಕ್ಕೆ ಹುಡುಕಾಟ ನಡೆದಿದೆ ಎಂದು ಸಂತೇಬೆನ್ನೂರು ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.