ADVERTISEMENT

ದಾವಣಗೆರೆ | ಜಾತಿ, ಧರ್ಮ ರಾಜಕಾರಣ ಮುನ್ನೆಲೆಗೆ: ಸಿದ್ದನಗೌಡ ಪಾಟೀಲ

ಸಿಪಿಐ ಶತಮಾನೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 4:35 IST
Last Updated 20 ಆಗಸ್ಟ್ 2025, 4:35 IST
<div class="paragraphs"><p>ಭಾರತ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ) ಶತಮಾನೋತ್ಸವ ಸಂಭ್ರಮದ ಸಂಘಟನಾ ಸಮಾವೇಶದ ಅಂಗವಾಗಿ ದಾವಣಗೆರೆಯ ಅಶೋಕ ರಸ್ತೆಯಲ್ಲಿ ಪಕ್ಷದ ಸದಸ್ಯರು ಮಂಗಳವಾರ ಮೆರವಣಿಗೆಯಲ್ಲಿ ಸಾಗಿದರು </p></div>

ಭಾರತ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ) ಶತಮಾನೋತ್ಸವ ಸಂಭ್ರಮದ ಸಂಘಟನಾ ಸಮಾವೇಶದ ಅಂಗವಾಗಿ ದಾವಣಗೆರೆಯ ಅಶೋಕ ರಸ್ತೆಯಲ್ಲಿ ಪಕ್ಷದ ಸದಸ್ಯರು ಮಂಗಳವಾರ ಮೆರವಣಿಗೆಯಲ್ಲಿ ಸಾಗಿದರು

   

ಪ್ರಜಾವಾಣಿ ಚಿತ್ರ

ದಾವಣಗೆರೆ: ಚುನಾವಣೆಯಲ್ಲಿ ಪ್ರಾಮಾಣಿಕರು ಗೆಲ್ಲುತ್ತಿದ್ದ ಕಾಲ ಮರೆಯಾಗಿ ಹಣವಂತರು ಜನಪ್ರತಿನಿಧಿಗಳಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾತಿ, ಧರ್ಮ ರಾಜಕಾರಣ ಮುನ್ನೆಲೆಗೆ ಬಂದಿದೆ ಎಂದು ಚಿಂತಕ ಸಿದ್ದನಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದರು.

ADVERTISEMENT

ಇಲ್ಲಿನ ರೋಟರಿ ಬಾಲಭವನದಲ್ಲಿ ಭಾರತ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ) ಜಿಲ್ಲಾ ಘಟಕವು ಪಕ್ಷದ ಶತಮಾನೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸಂಘಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯಾನಂತರ ದೇಶದಲ್ಲಿ ಕಾಂಗ್ರೆಸ್‌ ಹೊರತುಪಡಿಸಿದರೆ ಎಡಪಕ್ಷ ಪ್ರಬಲವಾಗಿತ್ತು. ಲೋಕಸಭೆಯ ವಿರೋಧ ಪಕ್ಷದ ಸ್ಥಾನವನ್ನು ಅಲಂಕರಿಸಿತ್ತು. ದೇಶದ ದುಡಿಯುವ ಜನರ ಮೊಟ್ಟ ಮೊದಲ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದ ಸಿಪಿಐಗೆ ಈಗ ಶತಮಾನೋತ್ಸವ ಸಂಭ್ರಮ. ಪಕ್ಷಕ್ಕೆ ಸಂಸತ್ತಿನಲ್ಲಿ ಶಕ್ತಿ ಇಲ್ಲದೇ ಇರಬಹುದು. ಚಳವಳಿ ಕಟ್ಟುವ ಬಲವನ್ನು ಉಳಿಸಿಕೊಂಡಿದೆ’ ಎಂದು ಹೇಳಿದರು.

‘ಸ್ವಾತಂತ್ರ್ಯ ಚಳವಳಿ ದಮನಕ್ಕೆ ಬ್ರಿಟಿಷರು ಹಲವು ರೀತಿಯ ಕಾಯ್ದೆಗಳನ್ನು ಅನುಷ್ಠಾನಕ್ಕೆ ತಂದಿದ್ದರು. ಕಾರಣವಿಲ್ಲದೇ ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದರು. ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಮೂಲಕ ಕೇಂದ್ರ ಸರ್ಕಾರ ಬ್ರಿಟಿಷರಂತೆ ವರ್ತಿಸುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ಮಣಿಸಲು ಈ ಕಾಯ್ದೆ ಬಳಸುವ ಹುನ್ನಾರ ನಡೆಸಿದೆ’ ಎಂದರು.

‘ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣಾ ಆಯೋಗವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾವಣೆ ಗೆಲ್ಲಲು ನಕಲಿ ಮತದಾರರನ್ನು ಸೃಷ್ಟಿಸಿ ಮತಗಳ್ಳತನ ಮಾಡುತ್ತಿದೆ. ಇದೊಂದು ಪ್ರಜಾಪ್ರಭುತ್ವ ವಿರೋಧಿ ಕಾರ್ಯವಾಗಿದ್ದು, ಆಯೋಗದ ನಡೆ ಅನುಮಾನಾಸ್ಪದವಾಗಿದೆ. ಚುನಾವಣಾ ಆಯೋಗವನ್ನು ರಕ್ಷಿಸುವ ಹೋರಾಟವನ್ನು ಸಿಪಿಐ ಹಮ್ಮಿಕೊಳ್ಳುತ್ತಿದೆ’ ಎಂದು ಹೇಳಿದರು.

ಸಮಾವೇಶಕ್ಕೂ ಮುನ್ನ ಗಾಂಧಿ ವೃತ್ತದಿಂಧ ಬಾಲಭವನದವರೆಗೆ ಮೆರವಣಿಗೆ ನಡೆಸಲಾಯಿತು. ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಆವರಗೆರೆ ಚಂದ್ರು, ಮುಖಂಡರಾದ ಎಚ್.ಜಿ.ಉಮೇಶ್, ಕೆ.ಜಿ.ಶಿವಮೂರ್ತಿ, ಜಿ.ಯಲ್ಲಪ್ಪ, ಎಸ್.ಎಸ್. ಮಲ್ಲಮ್ಮ, ಸುರೇಶ್ ಯರಗುಂಟೆ, ಐರಣಿ ಚಂದ್ರು, ಸರೋಜಾ ಹಾಜರಿದ್ದರು.

ಮಹಿಳೆಯರು ಯುವತಿಯರು ಕಾಣೆಯಾಗಿ ಧರ್ಮಸ್ಥಳದಲ್ಲಿ ಆತಂಕ ಮೂಡಿದೆ. ಸನಾತನ ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ
ಡಿ.ಎ.ವಿಜಯಭಾಸ್ಕರ್ ಸಹ ಕಾರ್ಯದರ್ಶಿ ಸಿಪಿಐ ರಾಜ್ಯ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.