ADVERTISEMENT

ಕನ್ನಡ ವಿಶ್ವ ಭಾಷೆಯಾಗಿ ಬೆಳೆಯಲಿ: ಡಾ. ಪ್ರಕಾಶ ಹಲಗೇರಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 16:11 IST
Last Updated 8 ನವೆಂಬರ್ 2020, 16:11 IST
ಪ್ರಕಾಶ್ ಹಲಗೇರಿ
ಪ್ರಕಾಶ್ ಹಲಗೇರಿ   

ದಾವಣಗೆರೆ:ಕನ್ನಡ ಭಾಷೆ ಅಳಿದುಹೋಗುತ್ತದೆ ಎಂದು ಕೆಲವರು ಹೇಳುತ್ತಿದ್ದು, ಇದು ಶುದ್ಧ ಸುಳ್ಳು ಎಂದುಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾ‍ಪಕ ಡಾ. ಪ್ರಕಾಶ ಹಲಗೇರಿ ಅಭಿಪ್ರಾಯಪಟ್ಟರು.

65ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತುವತಿಯಿಂದ ಭಾನುವಾರ ನಡೆದ ಅಂತರ್ಜಾಲ ‘ಕನ್ನಡ ನುಡಿಹಬ್ಬ’ದಲ್ಲಿ 8ನೇ ದಿವಸ ‘ಕನ್ನಡ ಭಾಷೆ ಅಸ್ಮಿತೆ ಮತ್ತು ಬಹುಮುಖಿ ಸಾಧ್ಯತೆ’ ವಿಷಯ ಕುರಿತು ಉಪನ್ಯಾಸನೀಡಿದರು.

‘ಒಂದು ಭಾಷೆ ಅಳಿದು ಹೋಗಬೇಕಾದರೆ ಆ ಭಾಷೆ ಯಾಡುವ ಮನುಷ್ಯ ಅಳಿದು ಹೋಗಬೇಕು. ಅದು ಆಗದ ಮಾತು’ ಎಂದರು.

ADVERTISEMENT

‘ಜಾಗತೀಕರಣದ ಸಂದರ್ಭದಲ್ಲಿ ಯಾವುದೇ ಒಂದು ದೇಶಿ ಭಾಷೆ ತನ್ನ ಕಸುವನ್ನು ಮೀರಿ ಅದು ವಿಶ್ವ ಭಾಷೆಯಾಗುವತ್ತ ದಾಪುಗಾಲಿಡಬೇಕು. ದೇಶಿ ಭಾಷೆಗಳಿಗೆ ಅಸ್ಮಿತೆ ಇದ್ದು, ಈ ಭಾಷೆಗಳ ಬಗ್ಗೆ ಆತ್ಮಾಭಿಮಾನ, ಸ್ವಾಭಿಮಾನದ ಸಂಕೇತ ಎನ್ನುವ ತಿಳಿವಳಿಕೆ ಜನರಲ್ಲಿ ಮೂಡಬೇಕಿದೆ’ ಎಂದರು.

‘2000 ವರ್ಷಗಳ ಇತಿಹಾಸವುಳ್ಳ ಕನ್ನಡ ಕೇವಲ ಚಿನ್ನದ ಭಾಷೆಯಲ್ಲ, ಪ್ರೊ. ಬರಗೂರು ರಾಮಚಂದ್ರಪ್ಪ ಹೇಳುವಂತೆ ಅನ್ನದ ಭಾಷೆಯಾಗಬೇಕು. ಇದಕ್ಕೆ ಸರ್ಕಾರದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿ ಕನ್ನಡಪರ ಸಂಸ್ಥೆಗಳು ಹೆಚ್ಚು ಜನಮುಖಿಯಾಗಿ ಸಾಗಬೇಕು’ ಎಂದು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ಎಲ್‌.ಜಿ. ಮಧುಕುಮಾರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.