ಸಂತೇಬೆನ್ನೂರಿನ ಚೈತನ್ಯ ಗುರುಕುಲ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಗುರುವಾರ ಗಗನಯಾನಿ ಸುನಿತಾ ವಿಲಿಯಮ್ಸ್ ಕ್ಷೇಮವಾಗಿ ಭೂಮಿಗೆ ಮರಳಿರುವುದನ್ನು ಭಾವಚಿತ್ರ ಹಿಡಿದು ಸಂಭ್ರಮಿಸಿದರು
ಸಂತೇಬೆನ್ನೂರು: ‘ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಕ್ಷೇಮವಾಗಿ ಭೂಮಿಗೆ ಮರಳಿರುವುದು ಸಂಭ್ರಮದ ಕ್ಷಣ’ ಎಂದು ಚೈತನ್ಯ ಗುರುಕುಲ ಸಂಸ್ಥೆಯ ಅಧ್ಯಕ್ಷ ಆರ್.ನಾಗರಾಜ್ ಹೇಳಿದರು.
ಇಲ್ಲಿನ ಚೈತನ್ಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಗುರುವಾರ ಗಗನಯಾನಿಗಳು ಕ್ಷೇಮವಾಗಿ ಭೂಮಿಗೆ ಮರಳಿದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
‘ಎಂಟು ದಿನಗಳಲ್ಲಿ ಭೂಮಿಗೆ ಹಿಂತಿರುಗಿ ಬರಬೇಕಾಗಿದ್ದ ಗಗನ ಯಾತ್ರಿಗಳು ಪ್ರೊಪಲ್ಶನ್ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದಾಗಿ 287 ದಿನಗಳು ಬಾಹ್ಯಾಕಾಶದಲ್ಲಿಯೇ ಇರಬೇಕಾಯಿತು. ಆದರೂ ದೃತಿಗೆಡದೆ 150ಕ್ಕೂ ಹೆಚ್ಚು ಪ್ರಯೋಗಳನ್ನು ನಡೆಸಿರುವುದು ಅವರ ಕಾರ್ಯದಕ್ಷತೆಗೆ ಸಾಕ್ಷಿ’ ಎಂದು ಶ್ಲಾಘಿಸಿದರು.
‘ಜೀವದ ಹಂಗು ತೊರೆದು ಸ್ಥಿರ ಮನಸ್ಥಿತಿಯಲ್ಲಿ ಗುರಿ ಮುಟ್ಟಿದ ಅಭೂತಪೂರ್ವ ಸಾಧಕರು. ಭಾರತೀಯ ಮೂಲದ ಸುನಿತಾ ಅವರ ಸಾಧನೆ ಮಹಿಳೆಯರಿಗೆ ಸ್ಫೂರ್ತಿ’ ಎಂದರು.
‘ಮಕ್ಕಳು ಬಾಹ್ಯಾಕಾಶದ ಬಗ್ಗೆ ಕುತೂಹಲ ಬೆಳೆಸಿಕೊಳ್ಳಬೇಕು. ಸಾಮಾನ್ಯರು ಊಹಿಸಲಾಗದ ಸಾಧನೆಯ ಮೈಲುಗಲ್ಲುಗಳನ್ನು ಅರಿಯಬೇಕು. ಬಾಹ್ಯಾಕಾಶದ ವಾತಾವರಣ, ತಾಂತ್ರಿಕ ಸಾಧನಗಳ ಬಳಕೆ, ಸಂಶೋಧನೆಗಳ ಪ್ರಯೋಜನಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಕೌತುಕ ಪಡುವ ಸಂಗತಿಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಬೇಕು’ ಎಂದು ತಿಳಿಸಿದರು.
ವ್ಯವಸ್ಥಾಪಕ ನಿರ್ದೇಶಕ ಆರ್.ಎನ್.ಶಿವುಸ್ವಾಮಿ ಹಾಗೂ ಶಿಕ್ಷಕ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.