ಚನ್ನಗಿರಿ: ಕನ್ನಡ ಭಾಷೆ 2 ಸಾವಿರ ವರ್ಷಗಳಿಗಿಂತಲೂ ಅತ್ಯಂತ ಪ್ರಾಚೀನವಾದ ಶ್ರೀಮಂತ ಭಾಷೆ. ಇಂತಹ ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟಿದ್ದು ಕುವೆಂಪು. ಕನ್ನಡ ಸಾರಸತ್ವ ಲೋಕದ ಮೊದಲ ಹೊಂಗಿರಣ ಅವರು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಶನಿವಾರ ರಾಷ್ಟ್ರಕವಿ ಕುಂವೆಂಪುರವರ ಜನ್ಮ ದಿನದ ಅಂಗವಾಗಿ ನಡೆದ ‘ವಿಶ್ವ ಮಾನವ’ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ ಹಾಗೂ ಸಂಸ್ಕೃತಿಯಲ್ಲಿ ಕನ್ನಡನಾಡು ಯಾವುದರಲ್ಲೂ ಕಡಿಮೆಯಲ್ಲ. ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸುತ್ತಿರುವುದು ನಾಡಿನ ಹೆಮ್ಮೆ. ಕನ್ನಡ ಎಂದರೆ ಮೊದಲು ನೆನಪಾಗುವುದು ಕುವೆಂಪು. ಅವರ ಕೃತಿಗಳಲ್ಲಿ ವಿಶ್ವ ಮಾನವ ಸಂದೇಶವನ್ನು ಸಾರಿದ್ದರಿಂದ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ವಿಶ್ವ ಮಾನವ ದಿನಾಚರಣೆ ಎಂದು ಆಚರಿಸಲಾಗುತ್ತಿದೆ ಎಂದರು.
ಕ್ಞೇತ್ರ ಶಿಕ್ಷಣಾಧಿಕಾರಿ ಆರ್. ಮಂಜುಳಾ, ಎಪಿಎಂಸಿ ಅಧ್ಯಕ್ಷ ಜಿ.ಎಸ್. ವೀರಭದ್ರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಿ.ಆರ್. ರೂಪಾ ಶ್ರೀಧರ್, ತಹಶೀಲ್ದಾರ್ ಎನ್.ಜೆ. ನಾಗರಾಜ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಯು. ಚನ್ನಬಸಪ್ಪ ಇದ್ದರು. ನವಚೇತನ ಶಾಲೆಯ ಸಹ ಶಿಕ್ಷಕ ಈ. ಎನ್. ಬಸವರಾಜ್ ಉಪನ್ಯಾಸ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.