ಚನ್ನಗಿರಿ: ಪಟ್ಟಣದ ಹೃದಯ ಭಾಗದಲ್ಲಿರುವ ಕೆರೆ ಜೀರ್ಣೋದ್ಧಾರಗೊಂಡು ನೋಡುಗರ ಕಣ್ಮನ ಸೆಳೆಯುತ್ತಿದೆ. ಈ ಹಿಂದೆ ಈ ಕೆರೆಯಲ್ಲಿ ಚರಂಡಿ ನೀರು ಸೇರಿ ಕೆರೆಯ ಬಳಿ ಹೋಗಲು ಜನರು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಎಲ್ಲರ ಗಮನಸೆಳೆಯುವ ಕೆರೆಯಾಗಿ ಮಾರ್ಪಟ್ಟಿದೆ.
ಇದು ಅತ್ಯಂತ ಸಣ್ಣ ಕೆರೆಯಾಗಿದ್ದು, ಸುಮಾರು 25 ಎಕರೆ ಪ್ರದೇಶವನ್ನು ಆವರಿಸಿದೆ. ಈ ಹಿಂದೆ ಬಸ್ ಮುಂತಾದ ವಾಹನಗಳನ್ನು ಸ್ವಚ್ಛಗೊಳಿಸುವ ಕೆರೆಯಾಗಿತ್ತು. ಬಸ್ ನಿಲ್ದಾಣದ ಬಳಿ ಇದ್ದಿದ್ದರಿಂದ ಗೂಡಂಗಡಿಗಳ ಕಸಕಡ್ಡಿಗಳೂ ಕೆರೆಗೆ ಸೇರಿ ನೀರು ಮಲಿನಗೊಳ್ಳುತ್ತಿತ್ತು. ಇದನ್ನು ಮನಗಂಡು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಈ ಕೆರೆಯನ್ನು ಪ್ರವಾಸಿ ಸ್ಥಳವನ್ನಾಗಿ ಮಾಡುವ ಉದ್ದೇಶದಿಂದ ಕೆರೆಯ ಜೀರ್ಣೋದ್ಧಾರಕ್ಕೆ ಸಣ್ಣ ನೀರಾವರಿ ಇಲಾಖೆಗೆ ₹ 3.5 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು.
ಈ ಅನುದಾನದಲ್ಲಿ ಕೆರೆಯ ನಾಲ್ಕು ಬದಿಗೂ ಕಲ್ಲಿನ ತಡೆಗೋಡೆ ನಿರ್ಮಿಸಿದ್ದು, ಒಂದು ಕಡೆ ವಾಯು
ವಿಹಾರಿಗಳಿಗಾಗಿ ಪಾದಚಾರಿ ರಸ್ತೆ ಮಾಡಲಾಗಿದೆ. ಹಾಗೆಯೇ ಕೆರೆಯಲ್ಲಿನ 4 ಅಡಿಗಳಷ್ಟು ಹೂಳನ್ನು ಎತ್ತಲಾಗಿದೆ. ಜತೆಗೆ ಪಟ್ಟಣದ ಚರಂಡಿಗಳಲ್ಲಿನ ನೀರು ಬಂದು ಸೇರದಂತೆ ಪ್ರತ್ಯೇಕ ಹೊಸ ಪೈಪ್ಲೈನ್ ವ್ಯವಸ್ಥೆ ಮಾಡಲಾಗಿದೆ. ಕೆರೆಗೆ ನೀರನ್ನು ತುಂಬಿಸಲು ನಾಲ್ಕು ಕೊಳವೆಬಾವಿಗಳನ್ನು ಕೊರೆಯಿಸಿ ನೀರನ್ನು ಬಿಡಲಾಗುತ್ತಿದೆ. ಅಷ್ಟೇ ಅಲ್ಲದೆ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಸೂಳೆಕೆರೆಯ ನೀರನ್ನು ಬಿಟ್ಟು ಕೆರೆಯನ್ನು ಸಂಪೂರ್ಣವಾಗಿ ತುಂಬಿಸ
ಲಾಗಿದ್ದು, ಕೆರೆಯ ಒಂದು ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ 13 ಹಾದು ಹೋಗಿದ್ದು, ಈ ಬದಿಗೆ ಸ್ಟೀಲ್ ಗ್ರಿಲ್ಗಳನ್ನು ಅಳವಡಿಸಲಾಗಿದೆ.
ಇನ್ನೂ ಹಲವು ಕಾಮಗಾರಿಗಳು ಕೈಗೊಳ್ಳಬೇಕಾಗಿದ್ದು ತ್ವರಿತಗತಿಯಲ್ಲಿ ಮುಕ್ತಾಯಗೊಳಿಸಿ, ಪ್ರಸಿದ್ಧ ಪ್ರವಾಸಿ ಸ್ಥಳವನ್ನಾಗಿ ಮಾಡಬೇಕೆಂಬುದು ಪಟ್ಟಣದ ಜನರ ಆಸೆಯಾಗಿದೆ ಎಂದು ಕನ್ನಡಪರ ಹೋರಾಟಗಾರ ಬಿ. ನಾಗರಾಜ್ ತಿಳಿಸಿದರು.
ಪ್ರವಾಸಿಗರನ್ನು ಸೆಳೆಯಲು ದೋಣಿ ವಿಹಾರ, ಕೆರೆಯ ಮಧ್ಯೆ ಕಾರಂಜಿ ನಿರ್ಮಾಣ ಹಾಗೂ ಕೆರೆಯ ಒಂದು ಭಾಗದಲ್ಲಿ ಈಜುಕೊಳ ನಿರ್ಮಾಣ ಮಾಡಲು ಅಗತ್ಯ ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕ
ಮಾಡಾಳ್ ವಿರೂಪಾಕ್ಷಪ್ಪ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.