
ಜಗಳೂರು: ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಎಂದು ಪಟ್ಟಣದ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಆರ್.ಚೇತನ್ ಹೇಳಿದರು.
ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ ಕಾನೂನು ಸೇವಾ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು -ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡತನ ಮತ್ತು ರಕ್ತ ಸಂಬಂಧಿಗಳ ಸಂಬಂಧ ಗಟ್ಟಿಗೊಳಿಸುವ ನೆಪವೊಡ್ಡಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ವಿವಾಹಕ್ಕೆ ಪಾಲಕರು ಮುಂದಾಗುತ್ತಿದ್ದಾರೆ. ಈ ಬಗ್ಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಬಾಲ್ಯವಿವಾಹವು ಶಿಕ್ಷಾರ್ಹ ಅಪರಾಧವಾಗಿದೆ. ಶಾಲೆ, ಕಾಲೇಜುಗಳಿಗೆ ತೆರಳುವ ಹದಿಹರೆಯದ ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಆರ್ಥಿಕವಾಗಿ ದುರ್ಬಲರಾದವರು ತಾಲ್ಲೂಕು ಮಟ್ಟದ ಕಾನೂನು ಸೇವಾ ಸಮಿತಿಯಿಂದ ಕಾನೂನು ನೆರವು ಪಡೆಯಬಹುದು. ಲೋಕ ಅದಾಲತ್ನಲ್ಲಿ ಸಿವಿಲ್ ವ್ಯಾಜ್ಯಗಳನ್ನು, ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಆರ್ಥಿಕ ಹೊರೆಯಿಂದ ಪಾರಾಗಬಹುದು. ಕೋರ್ಟ್ಗೆ ಅನಗತ್ಯ ಅಲೆದಾಟ ತಪ್ಪಿಸಿಕೊಳ್ಳಬಹುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮರಿಯಮ್ಮ, ಹಿರಿಯ ವಕೀಲ ವೈ.ಹನುಮಂತಪ್ಪ, ಪಿಡಿಒ ಪರುಶರಾಮ್, ಸದಸ್ಯರಾದ ದೇವರಾಜ್, ಲಲಿತಮ್ಮ, ಮಂಜಮ್ಮ, ಬಿ.ಟಿ. ಬಸವರಾಜ್, ಕೊಟ್ರೇಶ್, ಸಿಡಿಪಿಒ ಮೇಲ್ವಿಚಾರಕಿ ಎಚ್.ವಿ.ಶಾಂತಮ್ಮ, ಪಿಎಸ್ಐ ಓಂಕಾರನಾಯ್ಕ, ಪಿಸಿ ಬಸಪ್ಪ ಹ್ಯಾಳ್ಯ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.