ದಾವಣಗೆರೆ: ಜಿಲ್ಲಾ ಗೃಹರಕ್ಷಕ ದಳ ಪೂರ್ವ ವಲಯ ಮಟ್ಟದ ವೃತ್ತಿಪರ ಕ್ರೀಡಾ ಕೂಟದಲ್ಲಿ ದಾವಣಗೆರೆ ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.
ಇಲ್ಲಿನ ಡಿಎಆರ್ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಕ್ರೀಡಾಕೂಟದಲ್ಲಿ ಲಘು ರಕ್ಷಣೆ, ಹಗ್ಗ ಜಗ್ಗಾಟ, ಅಗ್ನಿಶಮನ, ಬಂದೂಕು ಸಹಿತ ಕವಾಯತು, ಕಬಡ್ಡಿ ಹಾಗೂ 4X100 ರಿಲೇಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದರು.
ವೈಯಕ್ತಿಕ ವಿಭಾಗದಲ್ಲಿ ಶಿವಮೊಗ್ಗದ ಶಿವಾನಂದ್ 100, 400 ಮೀಟರ್ ಓಟ, ಶಾಟ್ ಪಟ್, ಉದ್ದ ಜಿಗಿತ, ಎತ್ತರ ಜಿಗಿತಗಳಲ್ಲಿ ಪ್ರಶಸ್ತಿ ಪಡೆದುಕೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಬಹುಮಾನ ವಿತರಿಸಿ ಶುಭ ಹಾರೈಸಿದರು.
ದಾವಣಗೆರೆ ಎನ್ಸಿಸಿ 33ನೇ ಕರ್ನಾಟಕ ಬೆಟಾಲಿಯನ್ನ ಕಮಾಡಿಂಗ್ ಆಫೀಸರ್ ಕರ್ನಲ್ ನಿಕ್ಸನ್ ಹರ್ನಾಲ್ ಮಾತನಾಡಿ, ‘ಗೃಹ ರಕ್ಷಕ ದಳ ಕ್ರೀಡಾಕೂಟದಲ್ಲಿ ಎಲ್ಲರೂ ಪಾಲ್ಗೊಂಡಿರುವುದು ಖುಷಿಯ ಸಂಗತಿ. ಈ ಕ್ರೀಡೆಯು ಕೇವಲ ಬಹುಮಾನಗಳಿಗೋಸ್ಕರ ಇರದೇ ಜೀವ ರಕ್ಷಣೆಗೆ ಉಪಯುಕ್ತವಾಗಿವೆ. ಜನರ ಆಸ್ತಿ, ಪ್ರಾಣ ಕಾಪಾಡುವಲ್ಲಿ ಸಹಕಾರಿಯಾಗಿವೆ’ ಎಂದು ಹೇಳಿದರು.
ದಾವಣಗೆರೆ, ಚಿತ್ರದುರ್ಗ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ 140ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಇವರಲ್ಲಿ 50 ಮಂದಿಯನ್ನು ಆಯ್ಕೆ ಮಾಡಿ ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು. ಗುಂಪು ವಿಭಾಗದಲ್ಲಿ ಕಬಡ್ಡಿ, ವಾಲಿಬಾಲ್, ಓಟದ ಸ್ಪರ್ಧೆ, ಉದ್ದ ಜಿಗಿತ, ಎತ್ತರ ಜಿಗಿತ, ಶಾಟ್ಪಟ್, ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆದವು. ವೃತ್ತಿಪರ ಕ್ರೀಡೆಯಲ್ಲಿ ಪ್ರಥಮ ಚಿಕಿತ್ಸೆ, ಅಗ್ನಿಶಮನ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ದಾವಣಗೆರೆ ಹೋಂ ಗಾರ್ಡ್ಸ್ ಕಮಾಂಡೆಂಟ್ ಡಾ.ಬಿ.ಎಚ್. ವೀರಪ್ಪ, ಶಿವಮೊಗ್ಗ ಹೋಂ ಗಾರ್ಡ್ಸ್ ಎಸ್.ಶಿವಕುಮಾರ್ ಕಾರ್ಯಕ್ರಮದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.