ದಾವಣಗೆರೆ: ‘ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರ ಅವಧಿಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.
ಬೆಂಗಳೂರಿನಲ್ಲಿ ಆದ ಪದಗ್ರಹಣದ ನೇರಪ್ರಸಾರವನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವೀಕ್ಷಿಸಿ, ಮಾಧ್ಯಮದ ಮಂದಿಗೆ ಪ್ರತಿಕ್ರಿಯಿಸಿದರು.
‘ಕಾಂಗ್ರೆಸ್ ಬಗ್ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಕಾರ್ಯಕರ್ತರಿಗೆ ಹೊಸ ಹುರುಪು ಬಂದಿದೆ. ಪಂಚಾಯಿತಿ ಮಟ್ಟದಿಂದ ಹಿಡಿದು ಎಲ್ಲ ಕಡೆ ಶಿವಕುಮಾರ್ ಅವರ ಪದಗ್ರಹಣವನ್ನು ವೀಕ್ಷಿಸಿದ್ದಾರೆ’ ಎಂದರು.
‘ನಾನೇನು ಪಕ್ಷದಲ್ಲಿ ಹುದ್ದೆ ಕೇಳಲು ಹೋಗಲ್ಲ. ಅವರಾಗಿಯೇ ಕೊಡುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯೇ ಎಂಬ ಪ್ರಶ್ನೆಗೆ, ‘ಚುನಾವಣೆ ದೂರವಿದೆ. ಆ ಬಗ್ಗೆ ಈಗಲೇ ಹೇಳಲು ಬರುವುದಿಲ್ಲ. ಪಕ್ಷ ಅಧಿಕಾರಕ್ಕೆ ಬರುವುದಂತು ನಿಜ’ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಬಿ. ಮಂಜಪ್ಪ, ‘ಜಿಲ್ಲೆಯ 206 ಗ್ರಾಮ ಪಂಚಾಯಿತಿಗಳಲ್ಲಿ, ಪುರಸಭೆ, ನಗರಸಭೆಗಳ ವ್ಯಾಪ್ತಿಯಲ್ಲಿ, ಪಾಲಿಕೆಯ 20 ಕಡೆಗಳಲ್ಲಿ ನೇರ ವೀಕ್ಷಣೆಯ ವ್ಯವಸ್ಥೆ ಮಾಡಲಾಗಿದೆ. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸಹಿತ ಎಲ್ಲರೂ ಶಿವಕುಮಾರ್ಗೆ ಬೆಂಬಲ ನೀಡಿದ್ದಾರೆ. ಇದರಿಂದ ಕಾರ್ಯಕರ್ತರಿಗೆ ಉತ್ಸಾಹ ಬಂದಿದೆ. ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಮಾಡಿರುವ ತಂತ್ರಗಾರಿಕೆಯಲ್ಲಿ ಇದೂ ಒಂದು’ ಎಂದು ಹೇಳಿದರು.
ಕಾಂಗ್ರೆಸ್ನ ಇಂಟಕ್, ಮಹಿಳಾ, ಯುವ ಸಹಿತ ವಿವಿಧ ಘಟಕಗಳ ಪದಾಧಿಕಾರಿಗಳು ಈ ಕಾರ್ಯಕ್ರಮವನ್ನು ಜಿಲ್ಲಾಮಟ್ಟದಲ್ಲಿ ಉದ್ಘಾಟಿಸಿದರು. ಉಸ್ತುವಾರಿ ಅಮೃತೇಶ್ವರ್, ಮುಖಂಡರಾದ ಎ. ನಾಗರಾಜ್, ಸೈಯದ್ ಸೈಫುಲ್ಲ, ಎಸ್. ಮಲ್ಲಿಕಾರ್ಜುನ್, ನಾಸಿರ್ ಸಾಹೇಬ್, ಟಿ. ಬಸವರಾಜ್, ಚಮನ್ಸಾಬ್, ಅನಿತಾಬಾಯಿ ಮಾಲತೇಶ್, ಯತಿರಾಜ್, ಸಾಗರ ಎಲ್.ಎಚ್., ರಾಘವೇಂದ್ರ ಗೌಡ, ಗೋವಿಂದ, ಹರೀಶ್ ಕೆ.ಎಲ್., ರಾಘು ದೊಡ್ಮನಿ, ಕುರುಡಿ ಗಿರೀಶ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.