ದಾವಣಗೆರೆ: ‘ಮುಂದಿನ ಐದು ವರ್ಷಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕೇದಾರನಾಥ ಮಠದ ಶಾಖೆ ಸ್ಥಾಪನೆ ಹಾಗೂ ಮಂದಿರ ನಿರ್ಮಾಣದ ಉದ್ದೇಶವಿದೆ’ ಎಂದು ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕೇದಾರ ಜಗದ್ಗುರುಗಳ ಪೂಜಾ ಸೇವಾ ಸಮಿತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
‘ಉತ್ತರ ಭಾರತದಲ್ಲಿ ಊಖಿ ಮಠವಿದೆ. ಕೇದಾರನಾಥ ಮಂದಿರವಿದೆ. ಅದರಂತೆ ದಾವಣಗೆರೆ-ಹರಿಹರ ನಡುವೆ ಕೇದಾರ ಮಾದರಿಯ ಮಂದಿರ ನಿರ್ಮಿಸುವ ಮೂಲಕ ದಾವಣಗೆರೆಯನ್ನು ದಕ್ಷಿಣದ ಕೇದಾರ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. 2023ರ ಜನವರಿ 27ರಂದು ಗುರುಮಂದಿರ ನಿರ್ಮಾಣಕ್ಕೆ ರಂಭಾಪುರಿ ಶ್ರೀಗಳ ಜೊತೆಗೂಡಿ ಚಾಲನೆ ನೀಡಲಾಗುತ್ತಿದೆ’ ಎಂದು ಹೇಳಿದರು.
‘ಒಳ್ಳೆಯ ಕೆಲಸ ಮಾಡದ ಕೈಗಳು, ದುಷ್ಟ ವಾಕ್ಯಗಳನ್ನು ಕೇಳುವ ಕಿವಿಗಳಿಂದ ನಮ್ಮ ಶರೀರ ಅಪವಿತ್ರವಾಗುತ್ತಿವೆ. ಅನ್ಯಾಯದಿಂದ ಗಳಿಸಿದ ಹಣ ಎಂದಿಗೂ ಆನಂದ ನೀಡಲಾರದು. ಪ್ರತಿಯೊಬ್ಬರೂ ತಮ್ಮ ಪಂಚೇಂದ್ರಿಯಗಳನ್ನು ದುಷ್ಟ ದುರ್ಯೋಧನನಂತೆ ಬಳಸಬಾರದು. ಬದಲಾಗಿ ಪವಿತ್ರ ಕರ್ಣನಂತೆ ಬಳಸಬೇಕು’ ಎಂದರು.
ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ‘ಇಂದು ನಮ್ಮಲ್ಲಿ ಹಣ, ಅಧಿಕಾರ, ವಿದ್ಯೆ ಇದ್ದರೂ ಸಮಾಧಾನ, ಶಾಂತಿ ಇಲ್ಲ. ಇದಕ್ಕೆ ಮೂಲ ಪರಂಪರೆ, ತತ್ವ ಸಿದ್ಧಾಂತ ಕೈಬಿಟ್ಟಿರುವುದೇ ಕಾರಣ. ಧರ್ಮದ ಲಾಂಛನಗಳಾದ ವಿಭೂತಿ, ರುದ್ರಾಕ್ಷಿ ಹಾಗೂ ಇಷ್ಟಲಿಂಗ ಧಾರಣೆ ಅಳವಡಿಸಿಕೊಳಳಬೇಕು. ಮಕ್ಕಳಿಗೂ ಕಲಿಸಬೇಕು’ ಎಂದು ಕಿವಿಮಾತು ಹೇಳಿದರು.
ಶಿವಯೋಗಿಸ್ಬಾಮಿ, ಪೂಜಾ ಸಮಿತಿ ಸದಸ್ಯ ಕೆ.ಎಂ. ಸುರೇಶ್, ಅಜ್ಜಂಪುರ ಶೆಟ್ರು ಮೃತ್ಯುಂಜಯ, ಕೆ.ಆರ್. ಶಿವಕುಮಾರ್, ಎನ್. ಮಲ್ಲನಗೌಡ, ಶಿವಯೋಗಿ ಕಂಬಾಳಿಮಠ, ರಾಜಶೇಖರ್ ನಾಗಪ್ಪ, ಕಡೇಕೊಪ್ಪ ನಾಗಭೂಷಣ್, ಟಿ.ಎಚ್.ಎಂ. ವೀರೇಶ್, ಅರುಣ್ ಮುದ್ದಳ್ಳಿ, ಮಳಲಕೆರೆ ಗುರುಮೂರ್ತಿ, ಕೆ.ಶಿವಪ್ಪ, ಸಚ್ಚಿನ್ ಗೊಳಸಂಗಿ, ಮಾಗಾನಹಳ್ಳಿ ಗುರು, ಕೆ.ಜಿ. ವಾಗೀಶ, ಕಲ್ಲೇಶ್ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.