ADVERTISEMENT

₹5 ಕೋಟಿ ವೆಚ್ಚದ ಆಡಿಟೋರಿಯಂ ನಿರ್ಮಾಣ: ಶಾಸಕ ಜನಾರ್ದನ ರೆಡ್ಡಿ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 14:20 IST
Last Updated 8 ಜನವರಿ 2024, 14:20 IST
ಕಡರನಾಯ್ಕನಹಳ್ಳಿ ಸಮೀಪದ ಹೊಸಳ್ಳಿ ಹೇಮ ವೇಮನ ಸದ್ಬೋಧನಾ ವಿದ್ಯಾಪೀಠದ ದಶಮಾನೋತ್ಸವ ಸಮಾರಂಭವನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ಉದ್ಘಾಟಿಸಿದರು
ಕಡರನಾಯ್ಕನಹಳ್ಳಿ ಸಮೀಪದ ಹೊಸಳ್ಳಿ ಹೇಮ ವೇಮನ ಸದ್ಬೋಧನಾ ವಿದ್ಯಾಪೀಠದ ದಶಮಾನೋತ್ಸವ ಸಮಾರಂಭವನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ಉದ್ಘಾಟಿಸಿದರು   

ಕಡರನಾಯ್ಕನಹಳ್ಳಿ: ಹೇಮ ವೇಮನ ವಿದ್ಯಾಪೀಠದ ಅಧ್ಯಕ್ಷರಾದ ವೇಮಾನಂದ ಶ್ರೀ ಆಶಯದಂತೆ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ₹ 5 ಕೋಟಿ ವೆಚ್ಚದ ಆಡಿಟೋರಿಯಂ ನಿರ್ಮಿಸಿ ಕೊಡುವುದಾಗಿ ಶಾಸಕ ಜನಾರ್ದನ ರೆಡ್ಡಿ ಭರವಸೆ ನೀಡಿದರು.

ಸಮೀಪದ ಹೊಸಳ್ಳಿಯ ಮಹಾ ಯೋಗಿ ವೇಮನ ಸದ್ಬೋಧನಾ ವಿದ್ಯಾಪೀಠದ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ರೆಡ್ಡಿ ಸಮಾಜದ ಜೊತೆಗೆ ಎಲ್ಲ ಸಮುದಾಯದವರ ಸಹಕಾರದಿಂದ 2,500 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಮ್ಮಿಂದಲೂ ಅಳಿಲು ಸೇವೆ ಸಲ್ಲಲಿ ಎಂಬುದು ನಮ್ಮ ಆಶಯವಾಗಿದೆ’ ಎಂದರು.

ADVERTISEMENT

‘ವಿದ್ಯಾಪೀಠದ ಎಲ್ಲ ಕೆಲಸಗಳಿಗೆ ರೆಡ್ಡಿ ಸಮಾಜದವರು ಕೈ ಜೋಡಿಸಿ ಜ್ಞಾನ ದಾಸೋಹ, ಅಕ್ಷರ ದಾಸೋಹಕ್ಕೆ ಸಹಕಾರ ನೀಡಿದ್ದಾರೆ. ಜಾತಿ, ಮತಗಳನ್ನು ಮೀರಿ ಎಲ್ಲ ಜನಾಂಗಗಳ ಸಹಕಾರ ಈ ಮಠಕ್ಕೆ ದೊರಕಿದೆ. ಎಲ್ಲ ಸಮಾಜದ ಮಕ್ಕಳಿಗೂ ಶಿಕ್ಷಣ ಸಿಗಬೇಕು ಎಂಬುದು ನಮ್ಮ ಆಶಯ’ ಎಂದು ಸಾನಿಧ್ಯ ವಹಿಸಿದ್ದ ವೇಮಾನಂದ ಶ್ರೀ ಆಶೀರ್ವಚನ ನೀಡಿದರು.

‘ಸಿದ್ಧಗಂಗಾ ಮಠದ ಮಾದರಿಯನ್ನು ಅನುಸರಿಸಿ ಹೆಜ್ಜೆ ಹಾಕುತ್ತಿರುವ ವೇಮಾನಂದ ಶ್ರೀ, ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹ, ಅನ್ನದಾಸೋಹ, ವಸತಿಯನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದು ಬಸವಕುಮಾರ ಸ್ವಾಮೀಜಿ ತಿಳಿಸಿದರು.

ರೆಡ್ಡಿ ಸಮಾಜ ಎಲ್ಲ ಸಮುದಾಯಗಳನ್ನು ಅಪ್ಪಿಕೊಂಡಿದೆ. ಸಹೃದಯತೆಯಿಂದ ನಾವು ಏನಾದರೂ ಸಾಧಿಸಲು ಸಾಧ್ಯ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹೇಳಿದರು.

ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಡಾ.ಟಿ.ಜಿ.ರವಿಕುಮಾರ್ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ  ಏರ್ಪಡಿಸಲಾಗಿತ್ತು.

ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಶಾಸಕ ಕೋನರೆಡ್ಡಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಗೋವಿಂದ ರೆಡ್ಡಿ, ದಾನಿಗಳಾದ ಶಿವಾನಂದ ಮೇಲಗೇರಿ, ಕಾರಟಗಿಯ ವೆಂಕಟರೆಡ್ಡಿ, ರೆಡ್ಡಿ ಜನಸಂಘದ ನಾಗರಾಜ್, ಉದ್ಯಮಿ ರಾಜಾ ರೆಡ್ಡಿ, ದ್ಯಾವಪ್ಪ ರೆಡ್ಡಿ, ಕಾನೂನು ಸಲಹೆಗಾರ ರುದ್ರೇಶ್, ಆಡಳಿತಾಧಿಕಾರಿ ಸುಭಾಶ್ ಇದ್ದರು.

ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಭಾರಿ ಸಂಖ್ಯೆಯ ಜನರು ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.