ADVERTISEMENT

ವಿರಕ್ತ ಮಠದಲ್ಲಿ ನಿತ್ಯ ದಾಸೋಹ ಸೇವೆಗೆ ಚಿಂತನೆ

ವಿರಕ್ತ ಮಠದ ಬಸವಪ್ರಭು ಸ್ವಾಮೀಜಿಗಳಿಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 3:37 IST
Last Updated 4 ಡಿಸೆಂಬರ್ 2021, 3:37 IST
ಬಸವಪ್ರಭು ಸ್ವಾಮೀಜಿ
ಬಸವಪ್ರಭು ಸ್ವಾಮೀಜಿ   

ದಾವಣಗೆರೆ: ‘ಮೊಟ್ಟಮೊದಲ ಬಾರಿಗೆ ಜಿಲ್ಲೆಯಲ್ಲಿ ಬಸವಜಯಂತಿ ಆಚರಣೆ ಹಾಗೂ ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ತೃತೀಯ ದಶಮಾನೋತ್ಸವದ ಸವಿ ನೆನಪಿಗಾಗಿ ವಿರಕ್ತ ಮಠದಲ್ಲಿ ನಿತ್ಯ ದಾಸೋಹವನ್ನು ಆರಂಭಿಸಲು ನಿರ್ಧರಿಸಲಾಗಿದೆ. ಮುಂದಿನ ಬಸವಜಯಂತಿಯ ದಿವಸದಿಂದ ಇದು ಶುರುವಾಗಲಿದೆ’ ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು.

‘ನಗರದ ಕೂಲಿ ಕಾರ್ಮಿಕರು, ಶ್ರಮಿಕರು, ಆಟೊ ಚಾಲಕರು, ವಿದ್ಯಾಭ್ಯಾಸಕ್ಕಾಗಿ ಗ್ರಾಮೀಣ ಭಾಗಗಳಿಂದ ನಗರಕ್ಕೆ ಬಂದಿರುವ ಬಡ ವಿದ್ಯಾರ್ಥಿಗಳು, ಪಿ.ಜಿಯಲ್ಲಿ ಉಳಿದುಕೊಂಡಿರುವವರಿಗೆ ಪ್ರತಿನಿತ್ಯ ಸಂಜೆ 7.30ರಿಂದ 9ರ ವರೆಗೆ ಅನ್ನದಾಸೋಹ ಸೇವೆಯನ್ನು ಆರಂಭಿಸಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಸವೇಶ್ವರ ಸರ್ವಧರ್ಮ ದಾಸೋಹ ಸಂಘವು ನಗರದ ಉದ್ಯಮಿಗಳು, ದಾನಿಗಳು ಹಾಗೂ ಶ್ರೀಮಂತರ ಬಳಿ ದೇಣಿಗೆ ಪಡೆದು ಟ್ರಸ್ಟ್‌ಗೆ ಜಮಾ ಮಾಡಲಾಗುವುದು. ಪ್ರತಿ ದಿವಸ ಗೋಧಿ ಉಗ್ಗಿ, ಅನ್ನ ಸಾಂಬಾರು ಹಾಗೂ ವಿವಿಧ ಬಗೆಯ ಪ್ರಸಾದವನ್ನು ನೀಡಲು ಚಿಂತನೆ ನಡೆಸಿದೆ. ಅನ್ನದಾಸೋಹದ ಬಗ್ಗೆ ಶಿವಮೂರ್ತಿ ಮುರುಘಾ ಶರಣರ ಜೊತೆ ಚರ್ಚಿಸಿ ರೂಪುರೇಷೆಗಳನ್ನು ನಿರ್ಧರಿಸಲಾಗುವುದು’ ಎಂದು ಹೇಳಿದರು.

ADVERTISEMENT

ಚಿತ್ರರಂಗದ ದಿಗ್ಗಜರಾದ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್, ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಪುನೀತ್‌ ರಾಜ್‌ಕುಮಾರ್ ಸ್ಮರಣಾರ್ಥ ಅನ್ನದಾಸೋಹ ಹಮ್ಮಿಕೊಂಡಿದ್ದು, ಅಭಿಮಾನಿಗಳು ನೆರವು ನೀಡುವ ಭರವಸೆ ನೀಡಿದ್ದಾರೆ. ಹೆಚ್ಚಿನ ದೇಣಿಗೆ ನೀಡಿದವರನ್ನು ಸನ್ಮಾನಿಸುವ ಚಿಂತನೆ ನಡೆಸಿದೆ’ ಎಂದು ಹೇಳಿದರು.

ಬಸವೇಶ್ವರ ಸರ್ವಧರ್ಮ ದಾಸೋಹ ಸಂಘದ ಅಧ್ಯಕ್ಷ ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ನಾಗರಾಜ್, ವೀರಣ್ಣ, ಕರಿಯಪ್ಪ, ಅರವಿಂದ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.